ಚಿಕ್ಕಮಗಳೂರು: ಕೋವಿಡ್ 3ನೇ ಅಲೆಯ ಭೀತಿಯ ನಡುವೆ ರಾಜ್ಯ ಸರಕಾರ ಶಾಲೆಗಳ ಪುನಾರಂಭಕ್ಕೆ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೂ 1,41,870 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಶೇ.97.96ರಷ್ಟು ದಾಖಲಾತಿ ನಡೆದಿದೆ. ಸರಕಾರಿ ಶಾಲೆಗಳಲ್ಲಿ ಶೇ.2.21ರಷ್ಟು ದಾಖಲಾತಿ ಹೆಚ್ಚಳಗೊಂಡಿದೆ.
ಕಳೆದ ವರ್ಷ ಸರಕಾರಿ ಶಾಲೆಗಳಿಗೆ 67,502 ವಿದ್ಯಾರ್ಥಿಗಳು ದಾಖಲಾಗಿದ್ದರು.
ಈ ವರ್ಷ 69,021 ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ದಾಖಲಾಗಿದ್ದು, ಕಳೆದ ವರ್ಷ ಕ್ಕಿಂತ 1,520ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಶಾಲೆಯ ಕಡೆ ಮುಖ ಮಾಡಿದ್ದಾರೆ. ಕಳೆದ ವರ್ಷ 50,088 ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ದಾಖಲಾಗಿದ್ದು, ಈ ವರ್ಷ 45,245 ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ದಾಖಲಾಗಿದ್ದು ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಶೇ.9.67ರಷ್ಟು ದಾಖಲಾತಿ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಸರಕಾರಿ ಶಾಲೆಗಳೆಂದರೇ ಮುಖಮುರಿಯುತ್ತಿದ್ದ ಪೋಷಕರು ಈ ಬಾರಿ ಸರಕಾರಿ ಶಾಲೆಗಳತ್ತಾ ಮುಖ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾಫಿನಾಡಿನಲ್ಲಿ 8 ಶೈಕ್ಷಣಿಕ ವಲಯಗಳಿದ್ದು, 1 ರಿಂದ 10ನೇ ತರಗತಿಗೆ ಬೀರೂರು ವಲಯದಲ್ಲಿ 14,426 ವಿದ್ಯಾರ್ಥಿಗಳು ದಾಖಲಾಗಿದ್ದು, ಕಡೂರು ಶೈಕ್ಷಣಿಕ ವಲಯದಲ್ಲಿ 22,735 ವಿದ್ಯಾರ್ಥಿಗಳು, ಚಿಕ್ಕಮಗಳೂರು ಶೈಕ್ಷಣಿಕ ವಲಯದಲ್ಲಿ 40,861 ವಿದ್ಯಾರ್ಥಿ ಗಳು, ಕೊಪ್ಪ ಶೈಕ್ಷಣಿಕ ವಲಯದಲ್ಲಿ 11,387 ವಿದ್ಯಾರ್ಥಿಗಳು, ಮೂಡಿಗೆರೆ ವಲಯದಲ್ಲಿ 15,450 ವಿದ್ಯಾರ್ಥಿಗಳು ನರಸಿಂಹರಾಜಪುರ ವಲಯದಲ್ಲಿ 9,162 ವಿದ್ಯಾರ್ಥಿಗಳು, ಶೃಂಗೇರಿ ಶೈಕ್ಷಣಿಕ ವಲಯದಲ್ಲಿ 4,531 ವಿದ್ಯಾರ್ಥಿಗಳು ಮತ್ತು ತರೀಕೆರೆ ಶೈಕ್ಷಣಿಕ ವಲ ಯದಲ್ಲಿ 23,318 ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ 1,981 ಶಾಲೆಗಳಿದ್ದು, 1,331 ಸರ್ಕಾರಿ ಶಾಲೆಗಳಿವೆ. ಬೀರೂರು ವಲಯದಲ್ಲಿ 236, ಚಿಕ್ಕಮಗಳೂರು ವಲಯದಲ್ಲಿ 508, ಕಡೂರು 339, ಕೊಪ್ಪ 157, ಮೂಡಿಗೆರೆ 227, ನರಸಿಂಹರಾಜಪುರ 125, ಶೃಂಗೇರಿ 67 ಹಾಗೂ ತರೀಕೆರೆ ಶೈಕ್ಷಣಿಕ ವಲಯದಲ್ಲಿ 322 ಶಾಲೆಗಳಿದ್ದು, 1,41,870 ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿ ದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಗಳ ಕಡೆ ವಿದ್ಯಾರ್ಥಿಗಳು ಮತ್ತು ಪೋಷಕರು ಮುಖ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಚ್ಚಿದ್ದ ಶಾಲೆಗಳ ಪುನಾರಂಭ: ಪೋಷಕರು ಮತ್ತು ಮಕ್ಕಳಲ್ಲಿ ಶಾಸಗಿ ಶಾಲೆಗಳ ವ್ಯಾಮೋಹದಿಂದ ಇಂದು ಅನೇಕ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿಕೊಳ್ಳುತ್ತಿವೆ. ಆದರೆ, ಕಾಫಿನಾಡಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಚಿಕ್ಕಮಗಳೂರು ತಾಲೂಕಿನ ಸತ್ತಿಹಳ್ಳಿ, ಹಾದಿಹಳ್ಳಿ, ವಡ್ಡರಹಳ್ಳಿ ಶಾಲೆಗಳಿಗೆ ಮಕ್ಕಳು ದಾಖಲಾಗಿದ್ದಾರೆ. ಮತ್ತು ಈ ಶೈಕ್ಷಣಿಕ ವರ್ಷದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಲಕ್ಕಮ್ಮನಹಳ್ಳಿ ಮತ್ತು ನರಸಿಂಹರಾಜಪುರ ತಾಲೂಕಿನ ಕೆರೆಮನೆ ಶಾಲೆಗಳು ಮತ್ತೆ ಆಂರಭಗೊಂಡಿವೆ. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಈ ಶಾಲೆಗಳು ಪುನಾರಂಭಗೊಂಡಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ.
ಕೋವಿಡ್ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿ ಆರಂಭವಾಗುತ್ತಿದ್ದು, ಕೆಲವು ದಿನಗಳ ಹಿಂದೆ ಸೋಂಕಿನ ಪ್ರಮಾಣ ಹೆಚ್ಚಿದ್ದ ಮಲೆನಾಡು ಭಾಗದ ಜಿಲ್ಲೆಗಳಾದ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲು ಸರಕಾರ ಮುಂದಾಗಿಲ್ಲ, ಶಾಲೆ ಪ್ರಾರಂಭಿಸಲು ಸರಕಾರದಿಂದ ಇದುವರೆಗೂ ಯಾವುದೇ ನಿರ್ದೇಶನ ಬಂದಿಲ್ಲ.
ಬಿ.ವಿ.ಮಲ್ಲೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ