ಬಡ ಕುಟುಂಬದ ವಸತಿ ಕನಸಿಗೆ ಭಗ್ನ

ಬಣಕಲ್: ಸರಕಾರದ ವಿವಿಧ ವಸತಿ ಯೋಜನೆ ಕಾರ‌್ಯಕ್ರಮ ತಾಲೂಕಿ ನಲ್ಲಿ ನಿರೀಕ್ಷಿತ ಗುರಿ ಸಾಧಿಸದೆ ವಿಫಲಗೊಂಡಿದೆ.ಐದು ವರ್ಷಗಳ ಬಳಿಕ ಬಣಕಲ್ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಕೇವಲ 40ಮನೆಗಳು ಮಂಜೂರಾಗಿವೆ ಆದರೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ 100ಕ್ಕೂ ಅಧಿಕ ವಸತಿ ರಹಿತರಿದ್ದಾರೆ ಸರ್ಕಾರ ಇದರ ಕಡೆ ಗಮನ ಹರಿಸಬೇಕು ಎಂದು ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ತಾಲ್ಲೂಕು ಅಲ್ಪಸಂಖ್ಯಾತ ಕಾರ್ಯಧ್ಯಕ್ಷ ಇರ್ಫಾನ್ ರವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ .ವಸತಿ ನಿರ್ಮಾಣದ ಹೆಚ್ಚು ಸಹಾಯಧನಕ್ಕಾಗಿ ಬಡ ಕುಟುಂಬಗಳು ಇಟ್ಟ ಮೊರೆ ಸರಕಾರಕ್ಕೆ ಮುಟ್ಟಿಲ್ಲ. ಸಹಾಯಧನ ಮಂಜೂರು, ಒದಗಿಸಬೇಕಾದ ದಾಖಲೆ ನಿಯಮ ಬಡ ಕುಟುಂಬದ ವಸತಿ ಕನಸಿಗೆ ಭಗ್ನ ತಂದಿದೆ.
ವಸತಿ ಸೌಕರ‌್ಯ ಪಡೆಯಲು ಬಡ ಜನರಿಂದ ಬೇಡಿಕೆ ಇದ್ದರೂ ಸರಕಾರ ಮಂಜೂರು ನೀಡಲು ಮೀನಾಮೇಷ ಎಣಿಸುತ್ತಿದೆ. ಮಂಜೂರು ಪಡೆದು ವಸತಿ ನಿರ್ಮಿಸಿ ಕೊಂಡಿರುವ ಅನೇಕ ಫಲಾನುಭವಿಗಳಿಗೆ ಹಣ ನೀಡಲು ಸರಕಾರ ಸತಾಯಿಸುತ್ತಿದೆ. ಕಟ್ಟಡ ಸಾಮಗ್ರಿ ಬೆಲೆ ಗಗನ ಕ್ಕೇರಿದ್ದು , ಸರಕಾರ ನೀಡುವ 1.20 ಲಕ್ಷ ರೂ. ಅನುದಾನ ವಸತಿ ನಿರ್ಮಾಣಕ್ಕೆ ಸಾಕಾಗುತ್ತಿಲ್ಲ. ಈ ನಡುವೆ ಸರಕಾರಕ್ಕೆ ಗ್ರಾ.ಪಂ. ಸಲ್ಲಿಸಿದ ನಿವೇಶನ, ವಸತಿ ರಹಿತ ಫಲಾನುಭವಿಗಳ ಪಟ್ಟಿಗೆ ಧೂಳು ಹಿಡಿದಿದೆ.
ವಸತಿ ನಿರ್ಮಾಣ, ನಿವೇಶನ ಜಾಗ ಖರೀದಿಸುವ ಸಾಮರ್ಥ್ಯ ಇಲ್ಲದ ಬಡವರು ಸರಕಾರಿ ಜಾಗದಲ್ಲಿ ಆಶ್ರಯ ಪಡೆಯುವುದು ಅನಿವಾರ‌್ಯ. ಗ್ರಾ.ಪಂ.ಆಡಳಿತ ಮೂಲಕ ಸರಕಾರ ಈಗಾಗಲೇ ಪ್ರತಿ ಗ್ರಾಮದ ನಿವೇಶನ, ವಸತಿ ರಹಿತ ಕುಟುಂಬಗಳ ಪಟ್ಟಿ ಪಡೆದುಕೊಂಡಿದ್ದರೂ ಕಂದಾಯ ಪ್ರದೇಶದಲ್ಲಿ ನಿವೇಶನ, ವಸತಿ ಸೌಕರ‌್ಯ ಕಲ್ಪಿಸಿಕೊಡುವ ಅವಕಾಶ ಕಾನೂನಿನಲ್ಲಿದ್ದರೂ ಜಿಲ್ಲಾ, ತಾಲೂಕು ಆಡಳಿತ ಈ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಡವರ ಕನಿಷ್ಠ ವಸತಿ, ನಿವೇಶನ ಅಗತ್ಯ ಈಡೇರಿಸಲು ಸರಕಾರ ಮುಂದಾಗದಿರುವುದು ವಿಪರ‌್ಯಾಸದ ಸಂಗತಿ.
ಮರಳು, ಕಲ್ಲು, ಜಲ್ಲಿ, ಕಾರ್ಮಿಕ ಸಂಬಳ ಏರಿಕೆ ಆಗಿದ್ದರೂ ಸರಕಾರ ಹೆಚ್ಚು ಅನುದಾನ ಮಂಜೂರು ಮಾಡದಿರುವುದು ಫಲಾನುಭವಿಗಳ ಪಾಲಿಗೆ ಶಾಪವಾಗಿದೆ. ವಸತಿ ಯೋಜನೆ ಪ್ರಗತಿ ಹಿನ್ನಡೆಗೊಳ್ಳಲು ಸರಕಾರದ ನಿರ್ಲಕ್ಷ್ಯ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಕಟ್ಟಡ ಸಾಮಗ್ರಿಬೆಲೆ ಗಗನಕ್ಕೇರಿದೆ. ಮರಳು, ಸಿಮೆಂಟು, ಹೆಂಚು, ಕಲ್ಲು, ಕಾರ್ಮಿಕ ಸಂಬಳ ಹೆಚ್ಚಾಗಿದ್ದು ಸರಕಾರ ನೀಡುವ 1.20 ಲಕ್ಷ ರೂ ಅನುದಾನ ಯಾವ ಮೂಲೆಗೂ ಸಾಕಾಗುತ್ತಿಲ್ಲ. ಮಾರುಕಟ್ಟೆ ಪರಿಸ್ಥಿತಿ ಆಧರಿಸಿ ಸರಕಾರ ಅನುದಾನ ನೀಡುವ ಅಗತ್ಯವಿದೆ ಎನ್ನುವ ಅಭಿಪ್ರಾಯಕ್ಕೂ ಸರಕಾರ ಸ್ಪಂದನೆ ನೀಡದಿರುವುದು ಬಡ ಫಲಾನುಭವಿಗಳಿಗೆ ನುಂಗಲಾರದ ತುತ್ತಾಗಿದೆ. ಈ ನಡುವೆ ವಸತಿ ನಿಗಮದಿಂದ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಮನೆ ನಿರ್ಮಾಣ ಮೊತ್ತ ಬಿಡುಗಡೆ ಆಗುತ್ತಿಲ್ಲ ಎನ್ನುವ ದೂರಿದೆ.
ವಸತಿ, ನಿವೇಶನರಹಿತರಿಗೆ ಸೌಕರ‌್ಯ ನೀಡುವ ಅವಕಾಶವಿದ್ದರೂ ಜಿಲ್ಲಾ, ತಾಲೂಕು ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ವಾರ್ಡ್, ಗ್ರಾಮ, ಗ್ರಾ.ಪಂ ಸಾಮಾನ್ಯಸಭೆ ಯಲ್ಲಿ ಈ ವಿಷಯ ಹೆಚ್ಚು ಚರ್ಚೆಗೊಂಡು ನಿರ್ಣಯವಾದರೂ ಪ್ರಯೋಜನ ವಾಗಿಲ್ಲ. ಸರಕಾರ ಈ ಕುರಿತು ವಿಶೇಷ ಅಧ್ಯಯನ ನಡೆಸಿ ಖಚಿತ ತೀರ್ಮಾನ ತೆಗೆದುಕೊಂಡು ಜನರಿಗೆ ಅನುಕೂಲ ಮಾಡಲಿ. ವಸತಿ ನಿರ್ಮಾಣಕ್ಕೆ ಸರಕಾರ ಹೆಚ್ಚು ಮೊತ್ತದ ಅನುದಾನ ಮಂಜೂರು ಮಾಡಲಿ ಎಂದರು