ಚಿಕ್ಕಮಗಳೂರು: ಈಗಾಗಲೇ ಕೊರೊನಾ ಮೂರನೇ ಅಲೆಯ ಭೀತಿ ಕಾಡುತ್ತಿದೆ. ಈ ಮಧ್ಯೆ ಪ್ರವಾಸಿ ತಾಣಗಳತ್ತ ಸಹಸ್ರಾರು ಸಂಖ್ಯೆಯಲ್ಲಿ ಜನರು ಲಗ್ಗೆಯಿಡುತ್ತಿದ್ದಾರೆ. ಇಂದು (ಆಗಸ್ಟ್ 8) ಮುಂಜಾನೆಯಿಂದಲೇ ಪ್ರವಾಸಿಗರ ಹಾಟ್ ಸ್ಪಾಟ್ ಅಂತಾನೆ ಕರೆಯಿಸಿಕೊಳ್ಳುವ ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮುಳ್ಳಯ್ಯನಗಿರಿಗೆ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠದ ಕಡೆ ಹೊರಟಿದ್ದ ಪ್ರವಾಸಿಗರಿಗೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಶಾಕ್ ಕಾದಿತ್ತು. ಚೆಕ್ ಪೋಸ್ಟ್ ಬಳಿ ಧರಣಿ ನಡೆಸಿದ ಕಾಂಗ್ರೆಸ್ (Congress) ಕಾರ್ಯಕರ್ತರು ಪ್ರವಾಸಿಗರು ಮುಳ್ಳಯ್ಯನಗಿರಿ ಮಾರ್ಗದ ಕಡೆ ಹೋಗದಂತೆ ತಡೆದರು.
ಜಿಲ್ಲಾಡಳಿತ ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಪ್ರವಾಸಿಗರಿಗೆ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ರಿಪೋರ್ಟ್ ಇಟ್ಟುಕೊಂಡು ಬರುವಂತೆ ಸೂಚಿಸಿದೆ.ಆದರೆ ಹೊರರಾಜ್ಯದ ಪ್ರವಾಸಿಗರನ್ನ ಹೊರತುಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯದ ಪ್ರವಾಸಿಗರು ಮುಳ್ಳಯ್ಯನಗಿರಿ ಕಡೆ ಮುಖ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಇತರ ಜಿಲ್ಲೆಗಳ ಪ್ರವಾಸಿಗರಿಗೂ 72 ಗಂಟೆಯೊಳಗಿನ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕು ಅಂತಾ ಪಟ್ಟು ಹಿಡಿದು ಕೈ ಕಾರ್ಯಕರ್ತರು ಕೈಮರ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.
ಕೀ.ಮೀ ದೂರ ಟ್ರಾಫಿಕ್ ಜಾಮ್
ಪ್ರವಾಸಿಗರು ನಮ್ಮನ್ನ ಹೋಗಲು ಬಿಡಿ ಅಂತಾ ಎಷ್ಟೇ ಮನವಿ ಮಾಡಿಕೊಂಡರೂ ಕೈ ಕಾರ್ಯಕರ್ತರು ಬಿಡಲಿಲ್ಲ. ಪರಿಣಾಮ ಕೈಮರ ಚೆಕ್ ಪೋಸ್ಟ್ ಬಳಿಯಿಂದ ಚಿಕ್ಕಮಗಳೂರು ಮಾರ್ಗದ ಕಡೆ ಸುಮಾರು 2 ಕೀಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೂರಾರು ಕಾರುಗಳಲಿದ್ದ ಸಹಸ್ರಾರು ಪ್ರವಾಸಿಗರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಬೆಳ್ಳಂಬೆಳ್ಳಂಗೆಯೇ ಪರದಾಟ ನಡೆಸುವಂತಾಗಿತ್ತು. ಬೆಳಗಿನ ವೇಳೆ ಮುಳ್ಳಯ್ಯನಗಿರಿಗೆ ಹೋಗಿ ವೀಕೆಂಡ್ ಜಾಲಿ ಮಾಡಬೇಕು ಅಂದುಕೊಂಡಿದ್ದ ಪ್ರವಾಸಿಗರು ವಿಧಿಯಿಲ್ಲದೇ ರಸ್ತೆ ಮಧ್ಯೆ ಕಾದು ಕಾದು ಸುಸ್ತಾದರು. ಚೆಕ್ ಪೋಸ್ಟ್ ಸಿಬ್ಬಂದಿಗಳು ಎಷ್ಟೇ ಮನವಿ ಮಾಡಿಕೊಂಡರೂ ಕೈ ಕಾರ್ಯಕರ್ತರು ಪ್ರತಿಭಟನೆ ಕೈ ಬಿಡಲೇ ಇಲ್ಲ.
ಪೊಲೀಸರ ಎಂಟ್ರಿ; ಚೆಕ್ ಪೋಸ್ಟ್ ಬಳಿ ಭಾರೀ ಹೈಡ್ರಾಮಾ
ಸಂಚಾರ ದಟ್ಟಣೆ ಹೆಚ್ಚಾದಂತೆ ಚಿಕ್ಕಮಗಳೂರು ನಗರದಿಂದ ಪೊಲೀಸರು ಕೈಮರ ಚೆಕ್ ಪೋಸ್ಟ್ನತ್ತ ಧಾವಿಸಿದರು. ಜಿಲ್ಲಾಡಳಿತದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ರಸ್ತೆ ತಡೆ ನಡೆಸಬೇಡಿ ಅಂತಾ ಕೈ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು. ಆದರೆ ಪೊಲೀಸರ ಮಾತಿಗೂ ಪ್ರತಿಭಟನಾ ನಿರತರು ಸೊಪ್ಪು ಹಾಕದಿದ್ದಾಗ, ಪೊಲೀಸರು ಬಲವಂತದಿಂದಲೇ ಪ್ರತಿಭಟನೆಯನ್ನ ಹತ್ತಿಕ್ಕಿದ್ದರು. ಈ ವೇಳೆ ದೊಡ್ಡ ಹೈಡ್ರಾಮಾವೇ ಕೈಮರ ಚೆಕ್ ಪೋಸ್ಟ್ ಬಳಿ ನಡೆಯಿತು. ಕಾಂಗ್ರೆಸ್ ಮುಖಂಡ ರಸೂಲ್ ಖಾನ್ರನ್ನು ಪೊಲೀಸ್ ವಾಹನಕ್ಕೆ ತುಂಬಲು ಪೊಲೀಸರು ಹರಸಾಹಸ ನಡೆಸಿದರು. ಈ ವೇಳೆ ತಳ್ಳಾಟ, ನೂಕಾಟ ಏರ್ಪಟ್ಟಿತ್ತು. ಕೊನೆಗೆ ಪೊಲೀಸರು ಕಾಂಗ್ರೆಸ್ ಮುಖಂಡ ರಸೂಲ್ ಖಾನ್, ತನುಜ್, ಶರತ್, ಸಂತೋಷ್, ಸಂದೀಪ್ ಸೇರಿದಂತೆ ಅನೇಕರನ್ನ ಬಂಧಿಸಿ ಕರೆದೊಯ್ದರು.
ನಿಟ್ಟುಸಿರು ಬಿಟ್ಟ ಪ್ರವಾಸಿಗರು
ಮುಳ್ಳಯ್ಯನಗಿರಿಯತ್ತ ಪಯಣ
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಮಧ್ಯೆ ಕಾದು ಕಾದು ಸುಸ್ತಾಗಿದ್ದ ಪ್ರವಾಸಿಗರು ಪ್ರತಿಭಟನೆ ಕೊನೆಯಾದ ಬಳಿಕ ಮುಳ್ಳಯ್ಯನಗಿರಿ ಕಡೆ ಮುಖ ಮಾಡಿದರು. ಬೆಳ್ಳಂಬೆಳ್ಳಗೆಯೇ ಪ್ರಕೃತಿಯ ದರ್ಶನ ಮಾಡಬೇಕು ಅಂದುಕೊಂಡಿದ್ದ ಪ್ರವಾಸಿಗರಿಗೆ ಕೊಂಚ ನಿರಾಸೆಯಾದರೂ ಕೊನೆಗೂ ನಿಟ್ಟುಸಿರು ಬಿಟ್ಟು ವೀಕೆಂಡ್ ಮಸ್ತಿ ಮಾಡಲು ಮುಳ್ಳಯ್ಯನಗಿರಿಯತ್ತ ಸಂಚಾರ ಮುಂದುವರೆಸಿದರೆ. ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠಕ್ಕೆ ಆಗಮಿಸಿ ಪ್ರಕೃತಿಯ ಸೌಂದರ್ಯವನ್ನ ಸವಿಯುತ್ತಿದ್ದಾರೆ.