ಜಿಂಕೆಗೆ ತಿಂಡಿ ತಿನ್ನಿಸಿ ದಂಡ ಕಟ್ಟಿದ ದಂಡ ಕಟ್ಟಿದ ವರದಿಗಾರ

ಚಾಮರಾಜನಗರ :ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಬಾರದು ಮತ್ತು ವನ್ಯ ಪ್ರಾಣಿಗಳಿಗೆ ಯಾವುದೇ ತಿನಿಸುಗಳನ್ನು ನೀಡಬಾರದು ಎಂಬ ನಿರ್ಬಂಧವಿದ್ದರೂ ಅದನ್ನು ಉಲ್ಲಂಘಿಸಿದ ದೆಹಲಿಯ ಎನ್‌ಡಿಟಿವಿ ವರದಿಗಾರನಿಗೆ ದಂಡ ವಿಧಿಸಲಾಗಿದೆ.

ವರದಿಗಾರ ವಾಖ್ಹರ್ ಅಹಮದ್ ಜಿಂಕೆಗೆ ರಾಷ್ಟ್ರೀಯ ಹೆದ್ದಾರಿ ನಡುವೆ ತಿಂಡಿ ತಿನ್ನಿಸಿ ದಂಡ ಕಟ್ಟಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಬಂಡೀಪುರದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬಂಡೀಪುರ ವಲಯಕ್ಕೆ ಸೇರುವ ರಸ್ತೆಯಲ್ಲಿ ಜಿಂಕೆಗೆ ತಿಂಡಿ ತಿನ್ನಿಸಿದ್ದಾನೆ.


ಇದೇ ವೇಳೆ ಟ್ಯಾಕ್ಸಿ ಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರೊಬ್ಬರು ಆ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.


ಇದು ವೈರಲ್ ಆಗಿದ್ದು ಬಂಡೀಪುರ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ.


ಕೂಡಲೇ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಜಿಂಕೆಗೆ ತಿಂಡಿ ತಿನ್ನಿಸಿದ ಕಾರು ಕೆಎ 3 ಎಜಿ 9602ನ್ನು ಬೆನ್ನತ್ತಿದ್ದು, ಕೊನೆಗೂ ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದ ವೇಳೆ ಆತನ ಹೆಸರು ವಾಖ್ಹರ್ ಅಹಮದ್, ಎನ್‌ಡಿಟಿವಿ ನವದೆಹಲಿಯ ವರದಿಗಾರ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳು ದಂಡ ಕಟ್ಟಿಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.


ಈ ವಿಚಾರವನ್ನು ಗುಂಡ್ಲುಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ದೃಢಪಡಿಸಿದ್ದಾರೆ. Bandipur Tiger Reserve ಟ್ವೀಟರ್ ಖಾತೆಯಿಂದ ಈ ಕುರಿತು ಟ್ವೀಟ್ ಸಹ ಮಾಡಲಾಗಿದೆ.

ಇನ್ನು ಬಂಡೀಪುರ ಅರಣ್ಯ ಮೂಲಕ ಊಟಿ ಹಾಗೂ ಕೇರಳಕ್ಕೆ ಹಾದು ಹೋಗುವ ಹೆದ್ದಾರಿಗಳ ಬದಿಯಲ್ಲಿ ವನ್ಯ ಪ್ರಾಣಿಗಳು ಹಾದು ಹೋಗುವುದರಿಂದ ವಾಹನದಲ್ಲಿ ಸಂಚರಿಸುವವರು ರಸ್ತೆ ಮಧ್ಯೆ ವಾಹನ ನಿಲ್ಲಿಸಬಾರದು ಎಂಬ ನಿಯಮವಿದೆ. ಆದರೆ ಕೆಲವರು ಅದನ್ನು ಉಲ್ಲಂಘಿಸಿ ಉದ್ದಟತನ ತೋರುವುದು ಮಾಮೂಲಿಯಾಗಿದೆ.

ನಿಯಮ ಗಾಳಿಗೆ ತೂರುತ್ತಾರೆ ಇತ್ತೀಚೆಗೆ ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಅರಣ್ಯ ಇಲಾಖೆಯ ನಿಯಮ ಪಾಲಿಸದೆ, ಅರಣ್ಯ ಸಿಬ್ಬಂದಿಗಳ ಸೂಚನೆಗೂ ಬೆಲೆಕೊಡದೆ ವಾಹನಗಳನ್ನು ತಮಗೆ ಬೇಕಾದ ಕಡೆಗಳಲ್ಲಿ ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿರುವ ದೃಶ್ಯಗಳು ಕಂಡು ಬರುತ್ತವೆ.

ಪ್ರವಾಸಿಗರು ಮೇಲುಕಾಮನಹಳ್ಳಿ ಗೇಟ್ ತಲುಪುವ ಮುನ್ನವೇ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಯನ್ನು ಮಾಡಬಹುದು. ಆದರೆ ಹಾಗೆ ಮಾಡುವುದಿಲ್ಲ. ಅರಣ್ಯದೊಳಗೆ ತೆರಳಿದ ಬಳಿಕವೇ ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವುದು, ಜಿಂಕೆ, ಕಡವೆಗಳ ಫೋಟೋ ತೆಗೆಯುವುದು, ತಾವು ತಂದ ಆಹಾರ ವಸ್ತುಗಳನ್ನು ಸೇವಿಸುವುದು, ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿರುವ ದೃಶ್ಯಗಳು ಕಂಡು ಬರುತ್ತವೆ. ಇಲ್ಲಿ ವಿದ್ಯಾವಂತರೇ ನಿಯಮವನ್ನು ಗಾಳಿಗೆ ತೂರುತ್ತಿರುವುದು ಬೇಸರದ ಸಂಗತಿಯಾಗಿದೆ.


ಹೀಗೆ ತಮಗೆ ತೋಚಿದ ರೀತಿಯಲ್ಲಿ ವರ್ತಿಸುತ್ತಾರೆ. ಒಮ್ಮೊಮ್ಮೆ ಇಂತಹ ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿ ಆ ಸ್ಥಳದಲ್ಲಿದ್ದರೆ ಎಚ್ಚರಿಕೆ ನೀಡಿ ಕಳುಹಿಸಿ ಕೊಡುತ್ತಾರೆ.

ಪ್ರವಾಸಿಗರು ನಿಯಮ ಪಾಲಿಸಲಿ ಅರಣ್ಯದೊಳಗೆ ಪ್ರವೇಶಿಸುವ ಮುನ್ನ ಮೇಲುಕಾಮನಹಳ್ಳಿ, ಕೆಕ್ಕನಹಳ್ಳ, ಮದ್ದೂರು, ಮತ್ತು ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸುತ್ತಾರೆ. ಈ ವೇಳೆ ವಾಹನದಲ್ಲಿ ತೆರಳುವ ಪ್ರವಾಸಿಗರಿಗೆ ಪಾಲಿಸಬೇಕಾದ ನಿಯಮಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮನದಟ್ಟು ಮಾಡಬೇಕು.

ಆದರೆ ಇದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ಪ್ರವಾಸಿಗರೇ ಸೂಚನಾ ಫಲಕಗಳನ್ನು ನೋಡಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗೆ ಮಾಡಿದ್ದೇ ಆದರೆ ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳಿಗೆ, ಸಂಚರಿಸುವ ಪ್ರವಾಸಿಗರಿಗೂ ಒಳ್ಳೆಯದು ಎಂಬುದಂತು ನಿಜ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಅರಣ್ಯ ಇಲಾಖೆ ಸೂಚನೆಗಳನ್ನು ತಿಳಿಯುವುದು ಸಹ ಮುಖ್ಯವಾಗಿದೆ.