ಬಣಕಲ್ :ಸರಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಬಣಕಲ್ ನ ಪ್ರಾಥಮಿಕ ಆರೋಗ್ಯ ಕೇಂದ್ರ ಇದಕ್ಕೆ ಅಪವಾದ. ಈ ಆಸ್ಪತ್ರೆಗೆ ನಿತ್ಯ ನೂರಾರು ಬಡ ಜನರು ಚಿಕತ್ಸೆಗೆ ಆಗಮಿಸುತ್ತಾರೆ. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿರುವ ಏಕೈಕ ವೈದ್ಯ ಡಾ. ಇಕ್ಲಾಸ್ ಅಹ್ಮದ್ ಅವರ ಸ್ಪಂದನೆ.ವೈದ್ಯರು ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ರೋಗಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಡಾ. ಇಕ್ಲಾಸ್ ಅಹ್ಮದ್ ಮೂಲತಃ ಬಣಕಲ್ ನವರು ತಂದೆ ದಿವಂಗತ S.A. ಖುದ್ದುಸ್ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಚಿಕ್ಕಮಗಳೂರಿನಲ್ಲಿ ಕುಟುಂಬದೊಂದಿಗೆ ವಾಸಮಾಡುತ್ತಿರುವ ಇಕ್ಲಾಸ್ ಅಹ್ಮದ್ ,ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಪ್ಪಳ್ಳಿಯ ಮಾಡೆಲ್ ಇಂಗ್ಲಿಷ್ ಸ್ಕೂಲ್ ನಲ್ಲಿ ಮುಗಿಸಿ P.U.C. ವಿದ್ಯಾಭ್ಯಾಸವನ್ನು ಸರ್ಕಾರಿ ಜೂನಿಯರ್ ಕಾಲೇಜ್ ckm ನಲ್ಲಿ ಮುಗಿಸುತ್ತಾರೆ. ನಂತರ M.B.B.S. ವಿದ್ಯಾಭ್ಯಾಸವನ್ನು ಅಲ್ ಅಮೀನ್ ಮೆಡಿಕಲ್ ಕಾಲೇಜ್ ಬಿಜಾಪುರದಲ್ಲಿ ಮುಗಿಸುತ್ತಾರೆ. 13ಜುಲೈ 2006ರಲ್ಲಿ ತಾವು ಹುಟ್ಟಿದ ಊರಿನಲ್ಲೆ ವೈದ್ಯ ವೃತ್ತಿಯನ್ನು ಆರಂಭಿಸುತ್ತಾರೆ.
ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಇರುತ್ತವೆ. ಆದರೆ ಇಂಥ ಗ್ರಾಮೀಣ ಪ್ರದೇಶದಲ್ಲೇ ಹುಟ್ಟಿ ಬೆಳೆದ ಡಾ.ಇಕ್ಲಾಸ್ ಅಹ್ಮದ್ ಹಳ್ಳಿಗರ ಸಮಸ್ಯೆ ಅರಿವು ಹಾಗೂ ತಾವೂ ಕೂಡ ಇಂಥ ಸಮಸ್ಯೆಗಳನ್ನು ಅನುಭವಿಸಿದ್ದರಿಂದ ಬಡ ರೋಗಿಗಳ ಸೇವೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹಳ್ಳಿಗರ ಬಾಯಲ್ಲಿ ವೈದ್ಯ: ಮೊದಲು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಈ ಭಾಗದ ಜನರಲ್ಲಿತ್ತು.
ಬಣಕಲ್ ಗ್ರಾಮದ ಸರಕಾರಿ ಆಸ್ಪತ್ರೆಗೆ ಇಕ್ಲಾಸ್ ಅಹ್ಮದ್ ಆಗಮಿಸಿದ ನಂತರ ಇಲ್ಲಿಗೆ ಚಿಕಿತ್ಸೆ ಬರುವ ರೋಗಿಗಳ ಸಂಖ್ಯೆ ಅಧಿಕವಾಗಿದೆ.ಜನರು ಸರ್ಕಾರಿ ಆಸ್ಪತ್ರೆಯತ್ತ ಬರಲು ಹಿಂದೇಟು ಹಾಕುತ್ತಿದ್ದರು ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ ಎಂಬುದು ಜನರ ಆರೋಪವಿತ್ತು. ಆದರೇ ಇಕ್ಲಾಸ್ ಅಹ್ಮದ್ ಬಣಕಲ್ ನಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ದಿನದಿಂದ ಬಹಳಷ್ಟು ಜನರು ಖಾಸಗಿ ಆಸ್ಪತ್ರೆಗೆ ಹೋಗುವವರು ಸಹ ಒಮ್ಮೆ ಅವರ ಬಳಿ ಚಿಕಿತ್ಸೆಗೆ ಒಲವು ತೋರಿಸುತ್ತಿದ್ದಾರೆ.. ಅವರ ಕೈಗುಣ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ‘ಅವರು ಬಂದಮೇಲೆ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಬರುತಿದ್ದಾರೆ. ರೋಗಿಗಳೊಂದಿಗೆ ಅವರು ಸಹನೆಯಿಂದ ಚಿಕಿತ್ಸೆ ನೀಡುವ ರೀತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕಳೆದ18ವರ್ಷಗಳಿಂದ ಪ್ರಾಮಾಣಿಕವಾಗಿ ಬಣಕಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆಯೂ ಸಹ ಅವರ ಸೇವೆ ಬಡ ಜನರಿಗೆ ಸಿಗುವಂತಾಗಲಿ ,ಇಂತಹ ಒಬ್ಬ ಪ್ರಾಮಾಣಿಕ ವೈದ್ಯನ ಸೇವೆ ಬಣಕಲ್ ಗೆ ದೊರಕಿರುವುದು ನಿಜಕ್ಕೂ ಭಾಗ್ಯ ಎಂದು ಬಣಕಲ್ ನ ಜನತೆ ಸಂತೋಷ ವ್ಯಕ್ತಪಡಿಸುತ್ತಾರೆ.
ವರದಿ :✍️ಸೂರಿಬಣಕಲ್