ಚಿಕಮಗಳೂರು: ಮಳೆಯಿಂದಾಗಿ ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆಯ (Heavy Rains) ಆರ್ಭಟದಿಂದ ಹತ್ತಾರು ವರ್ಷ ಬಾಳಿ ಬದುಕಿದ ಮನೆ ನೆಲಸಮವಾಗಿದೆ. ವಿಧಿಯಿಲ್ಲದೇ ಪಕ್ಕದ ಮನೆಯವರ ಅಂಗಡಿಯ ಚಿಕ್ಕ ಕೋಣೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಮಳೆಗಾಲದಲ್ಲಿ ಜೀವನ ಮಾಡುವುದೇ ದೊಡ್ಡ ಸವಾಲಾಗಿದೆ. ದಯವಿಟ್ಟು ನಮಗೆ ಸೂಕ್ತ ಪರಿಹಾರ ನೀಡಿ ಅಂತ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ವೃದ್ಧ ದಂಪತಿ ಕಂಗಾಲು
ಮಳೆಯ ಆರ್ಭಟಕ್ಕೆ ಮನೆ ಕುಸಿದಿದ್ದು, ವೃದ್ಧ ದಂಪತಿ ಕಂಗಾಲಾಗಿದ್ದಾರೆ. ಚಿಕ್ಕಮಗಳೂರು (Chikmagalur)ತಾಲೂಕಿನ ಕೆರೆಮಕ್ಕಿ ಗ್ರಾಮದ ದುಗ್ಗೇಗೌಡ-ಜಯಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಹಿರಿ ಜೀವಗಳು ಮನೆ ಖಾಲಿ ಮಾಡಿದ್ದರು. ರಾತ್ರೋರಾತ್ರಿ ಮನೆ ಕುಸಿದಿದೆ. ಮನೆ ಕುಸಿತದಿಂದ ಹಂಚುಗಳು, ಪೀಠೋಪಕರಣಗಳು ಧ್ವಂಸವಾಗಿವೆ.
ಹೊಸ ಮನೆಗೆ ಒಂದು ವರ್ಷದ ಹಿಂದೆಯೇ ವೃದ್ಧ ದಂಪತಿ ಅರ್ಜಿ ಸಲ್ಲಿಸಿದ್ದರು. ಮನೆ ಮಂಜೂರಾಗಿದ್ದರೂ ಹಣ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದು, ಮನೆ ಕಳೆದುಕೊಂಡ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ನಿವೇಶನ ಕೊಡಲು 3 ಸಮಸ್ಯೆ ಇದೆ. ಒಂದು ಗುಂಪಿನ ಜನರು ಬೇರೆ ಕಡೆ ಹೋಗಲು ಸಿದ್ಧರಿಲ್ಲ. 2ನೇ ಗುಂಪು ಜಮೀನನ್ನು ಕೊಡಬೇಕು ಎಂದು ಹೇಳುತ್ತಿದ್ದಾರೆ. 3ನೇ ಗುಂಪು ಜಮೀನಿನ ಬಳಿಯೇ ಮನೆಗೆ ಜಾಗ ಕೇಳುತಿದ್ದಾರೆ. ಅದಕ್ಕೆ ಅರಣ್ಯ ಜಮೀನುಗಳಿರುವುದರಿಂದ ಸಮಸ್ಯೆಯಾಗುತ್ತಿದೆ. 9 ಜನರಿಗೆ ಸೂರು ಕಲ್ಪಿಸಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾಹಿತಿ ನೀಡಿದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ