ಕೊಟ್ಟಿಗೆಹಾರದಲ್ಲಿ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕೊಟ್ಟಿಗೆಹಾರ:ಎಲ್ಲರಿಗೂ ತಟ್ಟಬಹುದಾದಂತಹ ವಿಶಿಷ್ಟ ಬರಹದ ಮೂಲಕ ಕನ್ನಡದಲ್ಲಿ ಹೊಸ ರೀತಿಯ ಬೌಧ್ದಿಕತೆಯನ್ನು ತಂದವರು ತೇಜಸ್ವಿ ಎಂದು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ಕೇಶವಶರ್ಮ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಪ್ರತಿಷ್ಠಾನದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೇಜಸ್ವಿ ಅವರು ವ್ಯಕ್ತಿ ವಿಶಿಷ್ಟ ಸಿದ್ದಾಂತ ಕೃತಿಯಲ್ಲಿ ಹೇಳಿದ ಅಂಶಗಳು ಅವರ ಬಹುತೇಕ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಸಿಗುತ್ತದೆ. ತೇಜಸ್ವಿ ಅವರ ಕೃತಿಗಳು ಒಂದೇ ಓದುಗ ವರ್ಗಕ್ಕೆ ಸೀಮಿತವಾಗಿಲ್ಲ. ಶಾಲಾ ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲಾ ವರ್ಗದವರು ಓದುವಂತಹ ಕೃತಿಗಳನ್ನು ತೇಜಸ್ವಿ ಅವರು ಬರೆದಿದ್ದಾರೆ ಎಂದರು
ಆದರ್ಶ ಪುರುಷರ ಕುರಿತು ಹೇಳುವುದು ಅವರ ಉದ್ದೇಶವಾಗಿರಲಿಲ್ಲ. ಸಾಮಾನ್ಯ ಮನುಷ್ಯರ ಕುರಿತು ತೇಜಸ್ವಿ ಅವರು ಬರೆದರು. ತೇಜಸ್ವಿ ಅವರ ಕೃತಿಗಳನ್ನು ಓದುವಾಗ ಅಲ್ಲಿನ ಪಾತ್ರಗಳು ನಮ್ಮ ನಡುವಿನ ಪಾತ್ರಗಳೇ ಎನ್ನುವಷ್ಟು ಆಪ್ತ ಎನಿಸುತ್ತದೆ. ಲಂಕೇಶ್, ಅನಂತಮೂರ್ತಿ, ಅಡಿಗರು ಬರೆಯುತ್ತಿದ್ದ ಕಾಲಘಟ್ಟದಲ್ಲಿ ಬರೆದವರು ತೇಜಸ್ವಿ ಅವರು, ನವ್ಯದ ಗೀಳಿನಿಂದ ಹೊರ ಬಂದು ಎಲ್ಲರಿಗೂ ಅರ್ಥವಾಗಬಹುದಾದ ಕಥೆ ಕಾದಂಬರಿಗಳನ್ನು ಬರೆದರು ಎಂದರು.
ಕೆ.ಪಿ.ಪೂರ್ಣಚAದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ.ಸಿ ರಮೇಶ್ ಮಾತನಾಡಿ, ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕು ಎಂಬುದು ತೇಜಸ್ವಿ ಅವರ ಅಭಿಪ್ರಾಯವಾಗಿತ್ತು. ತೇಜಸ್ವಿ ಅವರಿಗೆ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಬದುಕು, ಬರಹ ಚಿಂತನೆಗಳ ಅನುಷ್ಠಾನಕ್ಕಾಗಿ ತೇಜಸ್ವಿ ಪ್ರತಿಷ್ಠಾನ ಕಾರ್ಯೋನ್ಮುಖವಾಗಿದೆ ಎಂದರು.
ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ ಮಾತನಾಡಿ, ತೇಜಸ್ವಿ ಅವರಿಗೆ ಎಲ್ಲಾ ವಿಷಯದ ಬಗ್ಗೆ ಕೂಡ ವಿಶೇಷ ಕುತೂಹಲಗಳಿದ್ದವು. ಕುತೂಹಲದ ಕಣ್ಣಿನಿಂದ ಜಗತ್ತನ್ನು ಕಂಡು ಅದನ್ನೆ ಕೃತಿಗಳಲ್ಲಿ ತಂದರು. ಬದುಕಿನ ಅನುಭವದಿಂದ ಬಂದ ಬರಹವಾಗಿರುವುದರಿಂದ ತೇಜಸ್ವಿ ಅವರ ಕೃತಿಗಳು ಓದುಗರಿಗೆ ಆಪ್ರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿಕ್ಕಮಗಳೂರಿನ ಶಾಂತಿನಿಕೇತನಾ ಚಿತ್ರಕಲಾ ಮಹಾವಿದ್ಯಾಲಯದಿಂದ ಡಿಜಿಟಲ್ ಚಿತ್ರ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಶಾಂತಿ ನಿಕೇತನಾ ಚಿತ್ರಕಲಾ ಮಹಾವಿದ್ಯಾಲಯದ ವಿಶ್ವಕರ್ಮ, ಲೇಖಕರಾದ ಪೂರ್ಣೇಶ್ ಮತ್ತಾವರ, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ಆದರ್ಶ್ ತರುವೆ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾದ ನಂದನ್ ಕುಪ್ಪಳ್ಳಿ, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಸಂಗೀತಾ, ಸಾಹಿತ್ಯಾಭಿಮಾನಿಗಳಾದ ಪೃಥ್ವಿ ಸೂರಿ, ಆನಂದ ಅಜ್ಜಂಪುರ, ಹಾಗು ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.