ಗ್ರಾಮ ಪಂಚಾಯಿತಿ ಚುನಾವಣೆಗೆ ತೆರೆ ಬಿದ್ದ ಬೆನ್ನಲ್ಲೇ ಬೆಟ್ಟಿಂಗ್ ಶುರು

!! ಬಣಕಲ್ :ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಲ್ಲೇ ಕ್ಷೇತ್ರದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದ್ದ ಉಸಿರುಗಟ್ಟುವಂತಹ ವಾತಾವರಣವೀಗ ಕರಗಿದ ಮಂಜುಗಡ್ಡೆಯಂತಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾದು ಕೆಂಡವಾಗಿದ್ದ ಚುನಾವಣಾ ರಣರಂಗವೀಗ ಮತದಾನ ಮುಗಿದ ನಂತರ ಸೈನಿಕರಲ್ಲದ ಯುದ್ಧಾಂಗಣದಂತೆ ಬರಿದಾಗಿ ಬಿಟ್ಟಿದೆ.
 
     ಇತ್ತ ಮತದಾರರರು ಚಲಾಯಿಸಿದ ಮತಗಳು ಭದ್ರವಾಗಿ ಡಬ್ಬದಲ್ಲಿ ಅವಿತುಕೊಂಡ ಬೆನ್ನಲ್ಲಿಯೇ ಕ್ಷೇತ್ರದ ಅಭ್ಯರ್ಥಿಗಳಲ್ಲಿ ನಿಲ್ಲದ ಆತಂಕ ಶುರುವಾಗಿದೆ. ಚುನಾವಣೆಗೂ ಮುನ್ನ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳಲ್ಲಿ ತರಾವರಿ ಆತಂಕಗಳೇ ಇದ್ದವು.

      ವಿವಿಧ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಮತ ಸೆಳೆಯಲು ನೀಡುತ್ತಿದ್ದ ಝಣ ಝಣ ಕಾಂಚಾಣದ ಸದ್ದು ಕ್ಷೇತ್ರದಾದ್ಯಂತ ವ್ಯಾಪಕವಾಗಿ ಸದ್ದು ಮಾಡಿತು. ಈ ಹಿಂದೆ ಎಂದೂ ಕೂಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರಿಂದ ಚಿಕ್ಕಾಸನ್ನೂ ಕಾಣದ ಬಹುತೇಕ ಮತದಾರರು, ಕಾಂಚಾಣದ ಸದ್ದಿಗೆ ಬೆಚ್ಚಿ ಬಿದ್ದಿದ್ದಾರೆ. ಗರಿಗರಿ ನೋಟುಗಳ ಹಂಚಿಕೆಯ ಅಬ್ಬರದ ಮುಂದೆ ಕೆಲ ಅಭ್ಯರ್ಥಿಗಳ ಮೈ ನಡುಗಿದ್ದಷ್ಟೇ ಅಲ್ಲದೆ, ಇಂತಹ ಚುನಾವಣೆಯನ್ನು ನಾವೆಂದೂ ಕಂಡಿಲ್ಲವೆಂದು ಹಿರಿಯರು ಶಪಿಸಿದ್ದೂ ಉಂಟು.

      ಇದೆಲ್ಲಕ್ಕೂ ಮಿಗಿಲಾಗಿ ಚುನಾವಣೆಯು ಇನ್ನೇನು ಒಂದೆರಡು ದಿನಗಳಲ್ಲಿ ಸಮೀಪಿಸಿ ಬಿಟ್ಟಿತು ಅನ್ನುವಷ್ಟರಲ್ಲಿ ಕ್ಷೇತ್ರದ ಮತದಾರರನ್ನು ಓಲೈಸಲು ನಡೆದಂತಹ ಕಸರತ್ತುಗಳ ನಡುವೆಯೂ ಪಕ್ಷದ ಅಭ್ಯರ್ಥಿಗಳ ಮೈ ಮೇಲಿನ ಬೆವರನ್ನು ಈ ಚುನಾವಣೆ ಇಳಿಸಿಬಿಟ್ಟಿದೆ.

      ವಿವಿಧ ಪಕ್ಷಗಳ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳುವಿಕೆ ಸೇರಿದಂತೆ ವಿವಿಧ ಜಾತಿ, ಜನಾಂಗಗಳ, ಸಮುದಾಯಗಳ ಮತ ಸೆಳೆಯಲು ನಡೆಸಿದ ತಂತ್ರಮಂತ್ರಗಳೆಲ್ಲವೂ ತೆರೆಮರೆಗೆ ಸರಿದು ಇದೀಗ ಅಭ್ಯರ್ಥಿಗಳ ಹಾಗೂ ಆಯಾ ಪಕ್ಷಗಳ ಮುಖಂಡರಲ್ಲಿನ ಆತಂಕವಂತೂ ಇಮ್ಮಡಿಗೊಂಡಿದೆ.

      ಮತದಾನ ಮುಗಿದ ಮಾರನೆಯ ದಿನದಿಂದಲೂ ಅಭ್ಯರ್ಥಿಗಳ ನಡುವಿನ ಪೈಪೋಟಿ ಹಾಗೂ ಸೋಲು-ಗೆಲುವಿನ ಲೆಕ್ಕಾಚಾರಗಳು ಭರದಿಂದ ನಡೆಯುತ್ತಿವೆ. ನಗರದ ಹಾಗೂ ಗ್ರಾಮೀಣ ಪ್ರದೇಶದ ಟೀ ಅಂಗಡಿಗಳು, ಹೇರ್‍ಸೆಲೂನ್‍ಗಳು, ಹಳ್ಳಿಕಟ್ಟೆಗಳು, ಶಾಲಾ ಮೈದಾನಗಳು ಸೇರಿದಂತೆ ಗಿಡ-ಮರಗಳ ನೆರಳಲ್ಲಿ ಕೂತು ಚುನಾವಣೆಯ ಫಲಿತಾಂಶ ಏನಾಗಬಹುದೆಂಬ ಲೆಕ್ಕಾಚಾರಗಳು ಬಿರುಸಿನಿಂದಲೇ ನಡೆಯುತ್ತಿವೆ.

      ಕಣದಲ್ಲಿ ಉಳಿದು ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳ ಮುಂದೆ ಕೂತು ಆಯಾ ಪಕ್ಷಗಳ ಕೆಲ ಕಾರ್ಯಕರ್ತರು ಬೂತ್‍ಗಳಲ್ಲಿ ನಡೆದ ಶೇಕಡಾವಾರು ಫಲಿತಾಂಶದ ಅಂದಾಜನ್ನು ಅಭ್ಯರ್ಥಿಗಳಿಗೆ ಹೇಳಿ, ಕೆಲವರು ತಮ್ಮ ತಮ್ಮ ಅಭ್ಯರ್ಥಿಗಳ ಕಿವಿಗೆ ಹೂ ಮುಡಿಸುತ್ತಿದ್ದರೆ, ಮತ್ತಲವರು ಅಭ್ಯರ್ಥಿಗಳ ತಲೆಗೆ ಹುಳ ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ.

      ಚುನಾವಣಾ ಕಣದಲ್ಲಿ ಅತ್ಯಂತ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಪಕ್ಷೇತರ ಪಕ್ಷದ ಅಭ್ಯರ್ಥಿಗಳಲ್ಲಿ ನೇರನೇರವಾದ ಹಣಾಹಣಿ ನಡೆದಿದ್ದರಿಂದ ಸದರಿ ಚುನಾವಣೆಯ ಫಲಿತಾಂಶದ ಬಗ್ಗೆ ಮತದಾರರು ಹಾಗೂ ಮುಖಂಡರುಗಳು ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡುತ್ತಿದ್ದಾರೆ.
 
     ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಮತದಾರರ ಹಾಗೂ ಕಾರ್ಯಕರ್ತರ ನಿರೀಕ್ಷೆಯನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಕಡೆ ಸಮಬಲ ಹೋರಾಟವಿದ್ದು , ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ.

      ಈ ಎಲ್ಲಾ ಆತಂಕ, ಅನುಮಾನಗಳ ನಡುವೆಯೂ ಈಗಾಗಲೇ ಬೆಟ್ಟಿಂಗ್ ಆಟ ಶುರುವಾಗಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ. ಆಯ್ಕೆ ಖಚಿತ ಎಂದು ತೀರ್ಮಾನಕ್ಕೆ ಬಂದು ಆ ಪಕ್ಷದ ಕಾರ್ಯಕರ್ತ-ಮುಖಂಡರು ಒಂದು ಕಡೆ ಗೆಲುವಿನ ನಗೆ ಬೀರುತ್ತಿದ್ದರೆ, ಇತ್ತ ಯಾವುದೇ ಕಾರಣಕ್ಕೂಕಾಂಗ್ರೆಸ್ ತನ್ನ ಅದಿಪತ್ಯ ಸಾದಿಸುತ್ತದೆ ಎಂದು ಕಾರ್ಯಕರ್ತರು ಭರವಸೆ ಹೊಂದಿದ್ದಾರೆ ಇದೆಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಲು ಮತಪೆಟ್ಟಿಗೆಯಲ್ಲಿ ಭದ್ರವಾಗಿ ಅಡಗಿದೆ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದು ಇನ್ನೂ 2ದಿನದಲ್ಲಿ ತಿಳಿಯಲಿದೆ