ಭಾರಿ ಮಳೆಯಿಂದ ಉದುರುತ್ತಿರುವ ಕಾಫಿಬೀಜಗಳು : ಚಿಕ್ಕಮಗಳೂರಿನ ಬೆಳೆಗಾರರು ಕಂಗಾಲು!

ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆ ಬೀಸ್ತಿರೋ ರಣ ಗಾಳಿ ಕಾಫಿಯನ್ನ ಗಿಡದಿಂದ ಸಂಪೂರ್ಣ ನೆಲಕ್ಕುದುರಿಸಿದೆ. ಕಾಫಿ ಉಳಿದ್ರೆ ಬದುಕು ಉಳಿದಂತೆ ಎಂದು ಭಾವಿಸಿದ್ದ ಬೆಳೆಗಾರರಿಗೆ ಈ ಬಾರಿಯೂ ವರುಣದೇವ ಅನಾಹುತ ತಂದೊಡ್ಡಿ ಮತ್ತೆ ಚಿಂತಿಸುವಂತಾಗಿದೆ

ಅದರಲ್ಲೂ ಕಳೆದ ಹತ್ತು ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು, ರೈತರು ತೋಟದ ಪರಿಸ್ಥಿತಿಯನ್ನ ಕಂಡು ಕಣ್ಣಿರಿಡುವಂತಾಗಿದೆ. ಗಿಡವನ್ನ ಮುಟ್ಟಿದರೆ ಕಾಫಿ ನೆಲಕ್ಕುದುರುವ ಸ್ಥಿತಿ ನಿರ್ಮಾಣವಾಗಿದೆ.ಕಳೆದ ಮೂರು ವರ್ಷದಿಂದ ಬೆಳೆಗಾರರು ಕಾಫಿಯನ್ನ ನಿರಂತರವಾಗಿ ಕಳೆದುಕೊಳ್ತಿದ್ದಾರೆ. ಕಳೆದ ಎರಡು ವರ್ಷವೂ ಕೂಡ ಮಹಾಮಳೆಯಿಂದ ಬೆಳೆಗಾರರು ಶೇಕಡ 60 ರಷ್ಟು ಕಾಫಿಯನ್ನ ಕಳೆದುಕೊಂಡ ಬೆಳೆಗಾರರು ಮರುಗಿದ್ರು. ಈ ಬಾರಿಯಾದ್ರು ಮಳೆರಾಯ ನಮ್ಮ ಮೇಲೆ ಕೃಪೆ ತೋರಬಹುದು ಅಂತಾನೇ ಎಲ್ಲರೂ ಭಾವಿಸಿದ್ರು.

ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಮಣ್ಣುಪಾಲಾಗಿದೆ. ಕಾಫಿ ಫಸಲಿನ ಜೊತೆಗೆ ಕಾಫಿ ಗಿಡಗಳು ಕೂಡ ತೀವ್ರ ಶೀತದಿಂದ ಸಾಯುತ್ತಿದ್ದು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಹಣ್ಣು ಆಗಬೇಕಿದ್ದ ಕಾಫಿ, ಈಗಾಗಲೇ ಕೆಂಪು ಬಣ್ಣಕೆ ತಿರುಗಿ ಹಣ್ಣಾಗಿದೆ. ಅಷ್ಟೇ ಅಲ್ಲದೇ ಮಳೆಯ ಹೊಡೆತಕ್ಕೆ ಕಾಫಿ ಉದುರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಒಟ್ಟಾರೆ, ಈ ವರ್ಷವೂ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಸಂಪೂರ್ಣ ಹೈರಾಣಾಗಿದ್ದಾರೆ. ಒಂದು ಎಕರೆ ಕಾಫಿ ತೋಟವನ್ನ ಕಾಪಾಡಿಕೊಳ್ಳಬೇಕಂದ್ರೆ ವರ್ಷಕ್ಕೆ ಕನಿಷ್ಠ 1 ಲಕ್ಷ ಬೇಕು. ಆದ್ರೆ, ಸತತ 3ನೇ ವರ್ಷ ಕಾಫಿ ಬೆಳೆಗಾರರು ಕಾಫಿಯನ್ನ ಕಳೆದುಕೊಳ್ಳುತ್ತಿರೋದ್ರಿಂದ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಎದುರಾಗಿದೆ. ಹಾಗಾಗಿ, ಬೆಳೆಗಾರರು ಸೂಕ್ತ ಪರಿಹಾರ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕೂಡಲೇ ಕೇಂದ್ರ-ರಾಜ್ಯ ಸರ್ಕಾರ ಸಂಕಷ್ಟದಲ್ಲಿರೋ ಕಾಫಿ ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.