ಬಿ. ಹೊಸಹಳ್ಳಿ ಗ್ರಾಮದಲ್ಲಿ ಒಂದೇ ದಿನ ಹುಲಿ ದಾಳಿಗೆ ಮೂರು ಹಸುಗಳು ಬಲಿ :ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬಣಕಲ್: ಪ್ರಾಣಿ -ಕಾಡಾನೆ ಹಾವಳಿಯಿಂದ ಬೇಸತ್ತಿದ್ದ ರೈತರು ಇದೀಗ ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ತಮ್ಮ ಜೀವನಕ್ಕೆ ಆಸರೆಯಾಗಿರುವ ದನಕರುಗಳನ್ನು ಕಳೆದುಕೊಂಡು ಸಂದಿಗ್ಧ ಪರಿಸ್ಥಿತಿ ಎದುರಿಸುವ ಭೀತಿಯಲ್ಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕ್ಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಹುಲಿ ದಾಳಿ ಮುಂದುವರೆದಿದೆ. ಇದೀಗ ಹುಲಿ ದಾಳಿಗೆ ಮತ್ತೊಮ್ಮೆ 3ಹಸುಗಳು ಬಲಿಯಾಗಿದೆ. ಹೀಗಾಗಿ ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ಜಾನುವಾರುಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಭವಿಷ್ಯದ ಬಗ್ಗೆ ಆಲೋಚಿಸುವಂತಾಗಿದೆ ಬೆಳಗ್ಗೆ ಮನೆಯಿಂದ ಗುಡ್ಡಕ್ಕೆ ಮೇಯಲು ಹೋದ ಹಸುಗಳು ವಾಪಸ್ ಬರುವವರೆಗೂ ಅನ್ನದಾತರು ಭಯದಲ್ಲೇ ಟೈಮ್​ ಕಳೆಯುವಂತಹ ಸ್ಥಿತಿ ಉಂಟಾಗಿದೆ. ಈಗಾಗಲೇ ಆನೆಗಳು, ಕಾಡುಕೋಣ ಸೇರಿದಂತೆ ಇತರೆ ಪ್ರಾಣಿಗಳ ದಾಳಿಯಿಂದ ಹೈರಾಣಾದ ಜನರು, ಈಗ ಹುಲಿ ದಾಳಿಯಿಂದ ಆತಂಕದಲ್ಲಿದ್ದಾರೆ.

ಈವರೆಗೂ ಹುಲಿ ದಾಳಿಗೆ ಭಾರತಿಬೈಲ್, ಕುಂದೂರು ಭಾಗಗಳಲ್ಲಿ 200ಕ್ಕೂ ಹೆಚ್ಚು ದನಕರುಗಳು ಬಲಿಯಾಗಿವೆ. ಹಲವು ಬಾರಿ ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಅಸಮಧಾನ ಹೊರ ಹಾಕಿದ್ದಾರೆ. ಹುಲಿ ದಾಳಿಯಿಂದ ನಿರಂತರವಾಗಿ ರಾಸುಗಳನ್ನ ಕಳೆದುಕೊಳ್ಳುತ್ತಿರುವ ರೈತರು, ತಕ್ಷಣ ಹುಲಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಹುಲಿ ದಾಳಿಯಿಂದ ರಾಸುಗಳು ಸಾವನ್ನಪ್ಪುತ್ತಿರುವುದು ಒಂದೆಡೆಯಾದ್ರೆ, ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತೋಟದ ಕೆಲಸಗಳು ಕುಂಟಿತಗೊಂಡಿವೆ.

ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಘ್ರವೇ ಹುಲಿಯನ್ನು ಸೆರೆಹಿಡಿಯುವ ಕೆಲಸವಾಗಬೇಕು ಎಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ

ವರದಿ :✍️ಸೂರಿ ಬಣಕಲ್