ಭಾರಿ ಗಾಳಿ ಮಳೆ ಧರೆಗುರುಳಿದ ಮರಗಳು: ತೆರವು ಗೊಳಿಸಿದ ಮತ್ತಿಕಟ್ಟೆ ಗ್ರಾಮಸ್ಥರು

ಬಣಕಲ್:ಕಳೆದೆರಡು ದಿನದಿಂದ ಸುರಿಯುತ್ತಿರುವ ಗಾಳಿ ಮಳೆಗೆ ಬಣಕಲ್ ಸುತ್ತ ಮುತ್ತ ಹಲವು ಮನೆಗಳು ಕುಸಿತ ಕಂಡು ಹಲವು ಮರಗಳು ಧರೆಗುರುಳಿವೆ. ಸೋಮವಾರ ರಾತ್ರಿ ಸುರಿದ ಮಳೆಗೆ ಬಣಕಲ್ ಮತ್ತಿಕಟ್ಟೆ ಹೆಗ್ಗುಡ್ಲು ಬಿ ಹೊಸಹಳ್ಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ
ಬಣಕಲ್ ನಿಂದ ಮತ್ತಿಕಟ್ಟೆ ಹೋಗುವ ರಸ್ತೆಯ ಬದಿಯಲ್ಲಿ ಇರುವ ದೊಡ್ಡ ಮರಗಳು ಬೇರು ಸಮೇತ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಗ್ರಾಮಸ್ಥರು ಮರವನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು
ಬೆಳಗಿನ ಜಾವಾ ಮತ್ತಿಕಟ್ಟೆ ಬಸ್ ನಿಲ್ದಾಣದ ಬಳಿ ಮತ್ತೊಂದು ಬೃಹದಾಕಾರದ ಮರವೊಂದು ಬೀಸಿದ ಭಾರಿ ಗಾಳಿ ಮಳೆಯಿಂದ ರಸ್ತೆಗೆ ಉರುಳಿವೆ.ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು ಮತ್ತಿಕಟ್ಟೆಯ ಯುವಕರು ಮರವನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅಣಿಗೊಳಿಸಿದರು , ತಾಲೂಕಿನ ಬಹುತೇಕ ರಸ್ತೆಗಳ ಆಸುಪಾಸಿನಲ್ಲಿರುವ ಮರಗಳು ಧರೆಗುರುಳಿರುವುದು ಒಂದೆಡೆಯಾದರೆ,ಇನ್ನೂ ಹಲವು ಮರಗಳು ಏಕಕಾಲಕ್ಕೆ ಒಣಗಿ,ಹಲವು ಬೃಹತ್‌ ಮರಗಳು ಬೀಳುವ ಸ್ಥಿತಿಯಲ್ಲಿವೆ. ಇಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು, ಸಾರ್ವಜನಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಆಸುಪಾಸಿನಲ್ಲಿ ಬೃಹತ್‌ ಆಕಾರದ ಮರಗಳು ವಿಶಾಲವಾಗಿ ಬೆಳೆದಿದ್ದು,ಅವುಗಳಲ್ಲಿ ಹಲವು ಮರಗಳು ಒಣಗಿದ್ದು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ಇಲ್ಲಿ ಪ್ರತಿ ನಿತ್ಯ ನಗರಗಳಿಗೆ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಈ ಮರಗಳು ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿ,ಮಳೆಗೆ ಹಲವು ಕಡೆ ಧರೆಗುರುಳಿದ್ದು, ಇವುಗಳು ಮೈಮೇಲೆ ಬಿದ್ದರೆ ಹೇಗೆ ಎಂಬ ಚರ್ಚೆ ಜತೆಗೆ ಆತಂಕವೂ ಜನತೆಯನ್ನು ಕಾಡಲಾರಂಬಿಸಿದೆ.