ಕಾಡಿಗೆ ಬಿಟ್ಟರೂ ಮತ್ತದೇ ಮಂಗ ಲಾರಿಯನ್ನೇರಿ ಕೊಟ್ಟಿಗೇಹಾರದಲ್ಲಿ ಪ್ರತ್ಯಕ್ಷ

ಚಿಕ್ಕಮಗಳೂರು: ವಾರದ ಹಿಂದೆ ಕೊಟ್ಟಿಗೆಹಾರದ ಮುರಾರ್ಜಿ ಶಾಲೆ ಸುತ್ತ ಮುತ್ತ ಪ್ರತ್ಯಕ್ಷವಾಗಿದ್ದ ಮತ್ತದೇ ಮಂಗ ಲಾರಿಯಲ್ಲಿ ಕೊಟ್ಟಿಗೆಹಾರಕ್ಕೆ ಬಂದಿಳಿದಿದ್ದರಿಂದ ಕೊಟ್ಟಿಗೆಹಾರ ಪ್ರದೇಶದಲ್ಲಿ ಪುನಃ ಅದೇ ಆತಂಕ ಮರುಕಳಿಸಿದೆ. ಈ ವಾನರ ಕಾಡನ್ನು ಬಿಟ್ಟು ನಾಡಿಗೆ ಯಾಕೆ ಬರುತ್ತಿದೆ ಎಂಬುದು ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ ಲಾರಿಯೊಂದರಲ್ಲಿ 22 ಕಿ.ಮೀ.ದೂರದಿಂದ ಮರಳಿರುವ ಈ ಮಂಗ, ರಾತ್ರಿ ಕೊಟ್ಟಿಗೆ ಹಾರ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸೆ.16ರಂದು ಇಲ್ಲಿನ ಮುರಾರ್ಜಿ ಶಾಲೆಯಲ್ಲಿ ಮಂಗ ಕಂಡವರ ಮೇಲೆ ಆಕ್ರಮಣ ಮಾಡಿತ್ತು ಅಂದು ಸುಮಾರು 50 ಜನರು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಲ್ಲದೆ, ಕೊನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಮಂಗನನ್ನು ಸೆರೆ ಹಿಡಿದಿದ್ದರು. ಬಳಿಕ ಅದನ್ನು 22 ಕಿ.ಮೀ. ದೂರ ತೆರಳಿ ಚಾರ್ಮಾಡಿ ಘಾಟ್​ನಲ್ಲಿ ಬಿಟ್ಟು ಬಂದಿದ್ದರು. ಆದರೆ ಅದೇ ಮಂಗ ಇಂದು ಲಾರಿಯೊಂದನ್ನು ಏರಿ ಮತ್ತದೇ ಪ್ರದೇಶಕ್ಕೆ ಬಂದಿಳಿದಿದೆ.ಇದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ