ಮಲೆನಾಡಿನಲ್ಲಿ ಧಾರಾಕಾರ ಮಳೆ ಕಾಫಿ ಅಡಿಕೆ ಕಾಳುಮೆಣಸು ಭತ್ತದ ಕೃಷಿಕರಲ್ಲಿ ಬೆಳೆ ನಷ್ಟದ ಭೀತಿ

ಚಿಕ್ಕಮಗಳೂರು, ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಆಗಾಗ್ಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಸದ್ಯ ಸುರಿಯುತ್ತಿರುವ ಮಳೆ ರೈತರ ಮುಖದಲ್ಲಿ ಆತಂಕದ ಛಾಯೆಗೆ ಕಾರಣವಾಗಿದ್ದು, ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಾರರು ಬೆಳೆ ನಷ್ಟದ ಭೀತಿಗೊಳಗಾಗಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ವರ್ಷಧಾರೆಯಾಗಿದೆ. ಕಳೆದ ಎರಡು ವರ್ಷಗಳ ಕಾಲ ಅತಿವೃಷ್ಟಿಯಾದ ಪರಿಣಾಮ ರೈತರು, ಸಾರ್ವಜನಿಕರು ಕೃಷಿ ಜಮೀನು, ಮನೆ ಹಾಗೂ ಬೆಳೆ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದಾರೆ.

ಈ ಬಾರಿ ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಾಫಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೈಕ್ಲೋನ್ ಪರಿಣಾಮ ಉತ್ತಮ ಮಳೆಯಾಗುತ್ತಿದ್ದು, ಕಳೆದ ಬುಧವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಬಯಲು ಭಾಗದ ಚಿಕ್ಕಮಗಳೂರು ತಾಲೂಕು ಸೇರಿದಂತೆ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚ ಮಳೆಯಾಗುತ್ತಿದ್ದು, ಉತ್ತಮ ಮಳೆ ಪರಿಣಾಮ ಇಲ್ಲಿನ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆಯಾದರೂ ಅಪಾಯದ ಮಟ್ಟ ತಲುಪದಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಧಾರಾಕಾರ ಮಳೆ ಮುಂದುವರಿದಲ್ಲಿ ನದಿ ಪಾತ್ರದಲ್ಲಿ ನೆರೆ, ಪ್ರವಾಹ ಸಂಭವಿಸಲಿದೆ ಎಂಬುದು ಜನರ ಭೀತಿಯಾಗಿದೆ.

ಇನ್ನು ಸದ್ಯ ಜಿಲ್ಲೆ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ರೈತರು, ಬೆಳೆಗಾರರಲ್ಲಿ ಮಂದಾಹಾಸ ಮೂಡಿಸುವ ಬದಲಿಗೆ ಆತಂಕದ ಛಾಯೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ ಜೂನ್, ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಸುರಿದ ಮಳೆ ಮಲೆನಾಡಿನ ಕೃಷಿಕರಲ್ಲಿ ಮತ್ತೆ ಅತಿವೃಷ್ಟಿಯಾಗುವ ಆತಂಕ ಮೂಡಿಸಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆಯ ಆರ್ಭಟ ಕಡಿಮೆಯಾದ ಪರಿಣಾಮ ಹೊಲ ಗದ್ದೆ ಕೃಷಿಕರು ಹಾಗೂ ಕಾಫಿ, ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು. ಮಳೆ ಕ್ಷೀಣಿಸಿದಂತೆ ಜಿಲ್ಲಾದ್ಯಂತ ಕೃಷಿ ಚಟುವಚಟಿಕೆಗಳು ಗರಿಗೆದರಿಕೊಂಡಿದ್ದವು, ಭತ್ತ ಗದ್ದೆಗಳು ಸೇರಿದಂತೆ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ನಡೆದಿತ್ತು.
ಸದ್ಯ ಭತ್ತದ
ಗದ್ದೆಗಳ ನಾಟಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಾಫಿ, ಅಡಿಕೆ ತೋಟಗಳಲ್ಲಿ ಕಳೆ, ಚಿಗುರು ತೆಗೆಯುವ ಕೆಲಸ ಪೂರ್ಣಗೊಂಡಿದ್ದು, ಗೊಬ್ಬರ, ಔಷಧ ಸಿಂಪಡಣೆಯ ಕೆಲಸ ನಡೆಯುತ್ತಿದೆ. ಆದರೆ ಸದ್ಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಕೃಷಿ ಚಟುವಟಿಕೆಗಳ ಪೂರ್ಣಕ್ಕೆ ಅಡ್ಡಗಾಲು ಹಾಕಿದಂತಾಗಿದೆ. ಮಲೆನಾಡಿನಾದ್ಯಂತ ಸದ್ಯ ಭತ್ತದ ಗದ್ದೆಗಳ ನಾಟಿ ಕೆಲಸ ಪೂರ್ಣಗೊಂಡಿದ್ದು, ಫೈರು ತೆನೆ ಕಟ್ಟುತ್ತಿದೆ. ಆದರೆ ಧಾರಾಕಾರ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಹಾಗೂ ಭತ್ತದ ತೆನೆ ಉದುರುತ್ತಿರುವುದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಕೃಷಿಕರು ಆತಂಕಕ್ಕೊಳಗಾಗುವಂತೆ ಮಾಡಿದೆ.

ಇನ್ನು ಧಾರಾಕಾರ ಮಳೆ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಾರರಲ್ಲೂ ಆತಂಕಕ್ಕೆ ಕಾರಣವಾಗಿದೆ. ಸತತ ಅತಿವೃಷ್ಟಿ, ಅಕಾಲಿಕ ಮಳೆ ಪರಿಣಾಮ ಕಳೆದ ಕೆಲ ವರ್ಷಗಳಿಂದ ಬೆಳೆ ನಷ್ಟ ಅನುಭವಿಸಿರುವ ಬೆಳೆಗಾರರು ಈ ಬಾರಿಯೂ ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಈಗಾಗಲೇ ಅಡಿಕೆ, ಕಾಫಿ, ಕಾಳು ಮೆಣಸು ತೋಟಗಳಲ್ಲಿ ಉತ್ತಮ ಫಸಲು ಬಂದಿದ್ದು, ಸತತ ಮಳೆಯಿಂದಾಗಿ ಬೆಳೆಗಳಿಗೆ ಕೊಳೆ ರೋಗ ನಿಧಾನವಾಗಿ ಆವರಿಸುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಪಡಿಪಾಟಲು ಅನುಭವಿಸುತ್ತಿದ್ದಾರೆ. ಕೊಳೆ ರೋಗಕ್ಕೆ ಔಷಧ ಸಿಂಪಡಣೆಗೆ ಮಳೆ ಅಡ್ಡಿಯಾಗಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶದ ಹೆಚ್ಚಳದಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳು ಉದುರಲಾರಂಭಿಸಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ, ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರು ಈ ಬಾರಿಯಾದರೂ ಬೆಳೆದ ಬೆಳೆ ಕೈ ಹಿಡಿಯಲಿದೆ ಎಂಬ ಆಶಾ ಭಾವನೆ ಮಧ್ಯೆ ಹವಾಮಾನ ವೈಫರೀತ್ಯದಿಂದಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೇಸತ್ತು ಹೋಗುವಂತಾಗಿದೆ.

ಸದ್ಯ ಸುರಿಯುತ್ತಿರುವ ಮಳೆ ಕಾಫಿ, ಅಡಿಕೆ, ಕಾಳು ಮೆಣಸಿಗೆ ಭಾರೀ ನಷ್ಟವನ್ನುಂಟು ಮಾಡಲಿದೆ. ಮಲೆನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಭಾರೀ ಮಳೆಯಾಗಿರುವುದರಿಂದ ಕೃಷಿ ಭೂಮಿಯಲ್ಲಿ ನೀರಿನ ತೇವಾಂಶ ಹೆಚ್ಚಳವಾಗಿದೆ. ಭಾರೀ ಮಳೆ ಹಾಗೂ ಭೂಮಿಯ ತೇವಾಂಶ ಹೆಚ್ಚಳದಿಂದ ಭತ್ತದ ಫೈರು
ಹಸನಾಗಿ ಬೆಳೆಯಲು ಸಾಧ್ಯವಾಗಲ್ಲ. ಕಾಳು ಮೆಣಸು ಬಳ್ಳಿ, ಕಾಫಿ ಗಿಡ, ಅಡಿಕೆ ಮರಗಳಲ್ಲಿ ಬೆಳೆ ಉದುರಲು ಹಾಗೂ ಕೊಳೆ ರೋಗ ಹರಡಲು ಕಾರಣವಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿದೆ, ಇನ್ನೂ ಮಳೆಯಾದಲ್ಲಿ ಬೆಳೆಗಾರರು ಹಿಂದಿನ ವರ್ಷಗಳಂತೆ ಈ ಬಾರಿಯೂ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ