ಮೂಡಿಗೆರೆ :ಮೂಡಿಗೆರೆಯ ಅಲೇಖಾನ್ ಹೊರಟ್ಟಿ ಬಳಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳೀಯರು ಹಾಗೂ ರೈತರಲ್ಲಿ ಆತಂಕ ಮೂಡಿಸಿವೆ. ಕಾಡಾನೆಗಳು ಸ್ಥಳೀಯ ತೋಟಗಳಲ್ಲಿ ದಾಳಿ ನಡೆಸಿದ್ದು, ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ.
ಅಷ್ಟೇ ಅಲ್ಲದೆ ಆಹಾರಕ್ಕಾಗಿ ತೋಟದಲ್ಲೇ ಜಾಂಡಾ ಹೂಡಿದೆ . ಸುಮಾರು ಇಪ್ಪತ್ತಕ್ಕೂ ಹೆಚ್ಚು ಆನೆಗಳ ಗುಂಪು ಅಲೇಖಾನ್ ಹೊರಟ್ಟಿ ಗ್ರಾಮದಲ್ಲಿನ ಸುರೇಶ್ ಗೌಡ, ಪ್ರಕಾಶ್ ಗೌಡ, ನಾರಾಯಣ ಗೌಡ, ಸಂದೀಪ್, ನಂಜುಂಡೇಗೌಡ, ರಾಮೇಗೌಡ ಮೊದಲಾದವರ ತೋಟಗಳಲ್ಲಿ ನುಗ್ಗಿ ದಾಂಧಲೆ ನಡೆಸಿವೆ.
ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಮರಳಿಸುವಂತೆ ಪಟಾಕಿ ಸಿಡಿಸಿ ಓಡಿಸಲಾಗಿತ್ತು, ಆದರೂ ಸಹ ಆನೆಗಳು ಮರಳಿ ಬಂದಿರುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಅವಕ್ಕೆ ಸರಿಯಾದ ಆಹಾರ ಸಿಗುತ್ತಿಲ್ಲ. ಇದರಿಂದ ರೈತರು ಬೆಳೆದ ಬೆಳೆ ಹಾನಿ ಮಾಡುತ್ತಿವೆ ಅರಣ್ಯ ಅಧಿಕಾರಿಗಳು ಕಾಡಾನೆ ಸಮಸ್ಯೆಯನ್ನು ಬಗೆಹರಿಸಬೇಕು. ಕಗ್ಗಂಟಾಗಿರುವ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಬೇಕು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಅವರು ಮಲೇ ಮನೆಗೆ ಭೇಟಿ ನೀಡಿ ಕಾಡಾನೆಗಳ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರು ಆದರೆ ಕಾಡಾನೆಗಳ ಉಪಟಳ ನಿಂತಿಲ್ಲ ಬೆಳೆಗಳನ್ನು ಕಾಡು ಪ್ರಾಣಿಗಳ ಹಾವಳಿಯಿಂದ ಉಳಿಸಲಾಗುತ್ತಿಲ್ಲ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.