ಬಣಕಲ್ ನಲ್ಲಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪಿ.ಎಸ್.ಐ ರೇಣುಕಾ

ಬಣಕಲ್ ನಲ್ಲಿ ಸಂತೆ ದಿನದಂದು ಗ್ರಾಮ ಪಂಚಾಯಿತಿ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವವರಿಗೆ ಇಂದು ಬಣಕಲ್ ಪೊಲೀಸರು ದಂಡ ವಿಧಿಸುವುದರ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಕಳೆದ ವಾರ ಬಣಕಲ್ ಸಾವರ್ಕರ್ ಯುವ ಪ್ರತಿಷ್ಟಾನ ವತಿಯಿಂದ ಬಣಕಲ್ ಠಾಣೆಗೆ ಬೇಕಾ ಬಿಟ್ಟಿ ವಾಹನ ನಿಲುಗಡೆ ಮಾಡುವವರಿಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದರು.

ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ರವರು ಸೋಮವಾರ ಬೆಳಗ್ಗೆ ಸಂತೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿ ವಾಹನ ಸವಾರರಿಗೆ ಬೇಕಾಬಿಟ್ಟಿ ವಾಹನ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು.

ಬಣಕಲ್ ಮುಖ್ಯ ರಸ್ತೆಯಲ್ಲಿ ಪರವಾನಿಗೆ ಪಡೆಯದೇ ವಾಹನ ಚಲಾಯಿಸುವರನ್ನು ತಪಾಸಣೆ ನಡೆಸಿ ಬಿಸಿ ಮುಟ್ಟಿಸಿದರು. ಕೆಲವರಿಗೆ ಬಿಸಿ ಮುಟ್ಟಿಸಿ ಪರವಾನಿಗೆ ಪಡೆಯದಿರುವವರು ಕೂಡಲೇ ಪರವಾನಿಗೆ ಪಡೆದುಕೊಳ್ಳಬೇಕು, ಅಪ್ರಾಪ್ತ ವಯಸ್ಕರಿಗೆ ಪೋಷಕರು ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಅವಕಾಶ ಕಲ್ಪಿಸಬೇಡಿ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಸ್.ಐ ರೇಣುಕಾರವರು ಇತ್ತೀಚಿಗೆ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಂಡುಬರುತ್ತಿದ್ದು ಇದನ್ನು ಕೂಡಲೆ ನಿಲ್ಲಿಸಿ ಪರವಾನಿಗೆ ಪಡೆದು ವಾಹನ ಚಲಾಯಿಸಬೇಕು ಎಂದರು.ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ದ್ವಿಚಕ್ರ ವಾಹನ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ ಎಂದರು.

ವರದಿ ✍️ಸೂರಿ ಬಣಕಲ್