ಬಣಕಲ್ ನಲ್ಲಿ ಸಾವರ್ಕರ್ ಯುವ ಪ್ರತಿಷ್ಟಾಪನದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ವಿಭಿನ್ನ ಶೈಲಿಯ ಶಿವದೂತೆ ಗುಳಿಗೆ ಎಂಬ ತುಳುನಾಟಕವನ್ನು ಪೆಬ್ರವರಿ 28ಆಯೋಜಿಸಲಾಗಿದೆ.
ವಿಜಯಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರ ಒಟ್ಟುಗೂಡುವಿಕೆಯಲ್ಲಿ ತುಳು ರಂಗಭೂಮಿಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿರುವ ಕಾಂತರ ಖ್ಯಾತಿಯ ಸ್ವರಾಜ್ ಶೆಟ್ಟಿ ಮುಖ್ಯ ನಟನೆಯಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ನಟ್ಟಿರುಳ ರಾತ್ರಿಯಲ್ಲಿ ಗುಳಿಗ ದೈವದ ಪಾತ್ರಧಾರಿ ನೋಡುಗರಲ್ಲಿ ಮಿಂಚು ಹರಿಸಲಿದ್ದಾರೆ. ಹಲವು ವರ್ಷಗಳ ಬಳಿಕ ನಾಟಕವೊಂದು ಸಾರ್ವಜನಿಕರನ್ನು ಮತ್ತೆ ರಂಗ ಭೂಮಿಯತ್ತ ಸೆಳೆಯುವಂತೆ ಮಾಡಿದ ಕೀರ್ತಿ ಈ ನಾಟಕಕ್ಕೆ ಸಲ್ಲುತ್ತದೆ. ವಿಭಿನ್ನ ಶೈಲಿಯ ಪೌರಾಣಿಕ ಕಥೆಯುಳ್ಳ ನಾಟಕ ಆಗಿದ್ದರಿಂದ ವೇದಿಕೆಯ ಸೆಟ್ಟನ್ನು ವಿಭಿನ್ನವಾಗಿ ರೂಪಿಸುತ್ತಾರೆ. ಕ್ಷಣಾರ್ಧದಲ್ಲಿ ಬದಲಾಗುವ ಕೈಲಾಸ ಮತ್ತು ವೈಕುಂಠಗಳ ದೃಶ್ಯಗಳು, ಮಿಂಚು ಹರಿಸುವ ಬೆಳಕಿನ ಚಿತ್ತಾರದಲ್ಲಿ ರಂಗ ವಿನ್ಯಾಸ ವಿಶಿಷ್ಟವಾಗಿ ಮೂಡಿ ಬರುತ್ತದೆ. ಸಂಪೂರ್ಣ ಕತ್ತಲ ನಡುವೆ ದೈವ ವೇದಿಕೆಗೆ ಎಂಟ್ರಿಯಾಗುವ ದೃಶ್ಯ ಕತ್ತಲಲ್ಲಿ ಕೊರೈಸುವ ದೇಹಕ್ಕೆ ಅಳವಡಿಸಿದ ರೇಡಿಯಂ ರಿಫ್ಲೆಕ್ಟರ್, ಗ್ರಾಫಿಕ್ಸ್ ತಂತ್ರ ಜ್ಞಾನದಲ್ಲಿ ಕತ್ತಲಲ್ಲಿ ಅತಿಂದಿತ್ತ ಚಲಿಸುವ ಗುಳಿಗ ದೈವ ಇವೆಲ್ಲ ನಾಟಕದ ಪ್ರಮುಖ ಆಕರ್ಷಣೆಗಳಾಗಿವೆ.
ಬಣಕಲ್ ನ ಸುಭಾಷ್ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಟಕವನ್ನು ಆಯೋಜಿಸಲಾಗಿದೆ, ಸಾರ್ವಜನಿಕರು ದೈವದ ಮಹಿಮೆಯನ್ನು ಕುಟುಂಬ ಸಮೇತರಾಗಿ ಬಂದು ಕಣ್ಣು ತುಂಬಿಕೊಳ್ಳಬಹುದು.
ವರದಿ :✍️ಸೂರಿ ಬಣಕಲ್