ಬಣಕಲ್ : ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ಕೇಬೈಲ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಗೆ ಪಲ್ಟಿಯಾಗಿದೆ.
ಹಾಸನದಿಂದ ಮೂಡಿಗೆರೆಯತ್ತ ಬರುತ್ತಿದ್ದ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಸ್ವಲ್ಪ ಮುಂದೆ ಸಾಗಿದ್ದರೂ ಆಳವಾದ ಕಂದಕಕ್ಕೆ ಉರುಳುವ ಅಪಾಯವಿತ್ತು. ಘಟನೆಯಿಂದ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಇದೇ ಜಾಗದಲ್ಲಿ ಖಾಸಗೀ ಬಸ್ಸೊಂದು ಪಲ್ಟಿಯಾಗಿ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಘಟನೆ ಮಾಸುವ ಮುನ್ನವೇ ಅದೇ ಜಾಗದಲ್ಲಿ ಲಾರಿ ಪಲ್ಟಿಯಾಗಿರುವುದು ಕಾಕತಾಳೀಯ ಎಂಬಂತಾಗಿದೆ.
ನಾಮಫಲಕಕ್ಕೆ ಒತ್ತಾಯ:
ಕಸ್ಕೇಬೈಲ್ ತಿರುವಿನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಜೀವ ಹಾನಿಗಳು ಆಗಿವೆ. ತಿರುವಿನ ಅರಿವಿರದೇ ವೇಗವಾಗಿ ಬರುವ ವಾಹನಗಳು ಒಮ್ಮೆಲೆ ಬ್ರೇಕ್ ಹಾಕಿ ಪಲ್ಟಿಯಾಗುತ್ತವೆ. ಅಲ್ಲದೇ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡಲಾಗದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಹೆದ್ದಾರಿ ಪ್ರಾಧಿಕಾರಿವು ತಿರುವಿನ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ತಿರುವಿನ ಜಾಗದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.