ಅಂದು ಪೇಪರ್ ಹಾಕುವ ಹುಡುಗ ಇಂದು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ

ಬಣಕಲ್ :ಸೂರ್ಯೋದಯಕ್ಕೂ ಮುನ್ನವೇ ನಗರದ ಬಹುತೇಕ ಮನೆಗಳಿಗೆ ಪತ್ರಿಕೆಗಳನ್ನು ಹಾಕಿ ಪ್ರಾಮಾಣಿಕವಾಗಿ ಕೆಲಸಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಬಾಲಕನೊಬ್ಬ ಈಗ ಕೃಷಿ ಪತ್ತಿನ ಉಪಾಧ್ಯಕ್ಷನಾಗಿ ಬೆಳೆದ ರೀತಿ ನಿಜಕ್ಕೂ ಶ್ಲಾಘನೀಯ. ಅವರೇ ಈ ವಾರದ ನಮ್ಮ ವಿಶೇಷ ವ್ಯಕ್ತಿ ಬಿ. ಆರ್. ರಂಗನಾಥ್.. ಅವರು ಸಾಗಿ ಬಂದ ಪಯಣದ ಒಂದು ಕಿರು ಪರಿಚಯ ಇವತ್ತಿನ ನಮ್ಮಬಣಕಲ್ ನ್ಯೂಸ್ ವತಿಯಿಂದ..ಪತ್ರಿಕೆ ಹಾಕುವ ಬಹುತೇಕ ಹುಡುಗರ ಬಳಿ ಸರಿಯಾಗಿ ಮೈ ಮುಚ್ಚುವಂತಹ ಬಟ್ಟೆಯೂ ಇರುವುದಿಲ್ಲ. ಇವತ್ತು ಒಂದು ದಿನ ಸ್ವಲ್ಪ ಹೊತ್ತು ನಿದ್ದೆ ಮಾಡಿ ಬಿಡೋಣ ಎನ್ನುವಂತಿಲ್ಲ. ಪ್ರತಿ ದಿನವೂ ಎಲ್ಲರೂ ಏಳುವಷ್ಟರಲ್ಲಿ ಹೊರ ಜಗತ್ತಿನಲ್ಲಿ ವ್ಯವಹಾರಗಳು ಆರಂಭವಾಗುವುದಕ್ಕೂ ಮೊದಲೇ ಪತ್ರಿಕೆ ಹಂಚುವವರು ತಮ್ಮ ಕೆಲಸ ಮುಗಿಸಿ ತಮ್ಮ ಸಾಲ ಕಾಲೇಜುಗಳಿಗೆ ಹೋಗಬೇಕು. ಆಗಾಗಿ ಇವರ ಶ್ರಮ ಯಾರ ಕಣ್ಣಿಗೂ ಬೀಳುವುದಿಲ್ಲ ಒಂದು ದಿನ ಮನೆಗೆ ಪತ್ರಿಕೆ ಬಾರದಿದ್ದಾಗ ಅಥವಾ ತಡವಾಗಿ ಬಂದಾಗ ಪತ್ರಿಕೆಗಳನ್ನು ಹಂಚುವ ಈ ಹುಡುಗರ ನೆನಪಾಗುತ್ತಾರೆ. ಒಂದರ್ಥದಲ್ಲಿ ಇವರು ತಮ್ಮ ಕೆಲಸಕ್ಕೆ ಮಾನ್ಯತೆ ಕೇಳದ ನಿಸ್ವಾರ್ಥ ಸೈನಿಕರಿದ್ದಂತೆ. ಅದಕ್ಕೆ ತಾಜಾ ಉದಾಹರಣೆಯೇ ರಂಗನಾಥ್. ಇಂದು ಅವರು ಬೆಳೆದ ರೀತಿಯೇ ಎಲ್ಲರಿಗೂ ಮಾದರಿ.ತಂದೆ ರಾಮಣ್ಣ ತಾಯಿ ಕಮಲ ದಂಪತಿಯರ ಮೂರನೇ ಮಗನೇ ಬಿ.ಆರ್. ರಂಗನಾಥ್.ಇಡೀ ಸಂಸಾರದ ನೊಗ ಹೊತ್ತು ಬೆಳಗ್ಗೆ, ರಾತ್ರಿ ಕೆಲಸ ಮಾಡುತ್ತಾ ಓದಿದ ಹುಡುಗನದ್ದು ಅತ್ಯುತ್ತಮ ಸಾಧನೆ ಎನಿಸಿತು. ಹೌದು, ಆತನದ್ದು ಹೋರಾಟದ ಬದುಕು. ಕಡು ಬಡತನ ಒಂದು ಹೊತ್ತು ಊಟಕ್ಕೂ ಕಷ್ಟ 10 ಸೆಂಟ್ಸ್‌ ಹಿತ್ತಿಲು, ಚಿಕ್ಕ ಮನೆ ಅಷ್ಟೇ ಅವರಿಗಿದ್ದ ಆಸ್ತಿ. ಆದರೂ ಅವನು ಧೃತಿಗೆಡಲಿಲ್ಲ. ತಾನೇ ಮುಂದೆ ನಿಂತು ಮನೆಯ ಜವಾಬ್ದಾರಿ ಹೊತ್ತುಕೊಂಡ. ಅಕ್ಕ, ತಮ್ಮ ಜತೆಗೆ ತನ್ನ ಓದಿಗೆ ಕೆಲಸ ನಿರ್ವಹಿಸಲು ಮುಂದಾದ. ಜತೆಗೆ ತಾಯಿ ಬೀಡಿ ಕಟ್ಟುತಿದ್ದರು . ತಂದೆ ದೋಬಿ ಕೆಲಸ ಮಾಡುತ್ತ ಬದುಕು ಸಾಗಿಸುತಿದ್ದರು ಆದರೆ ಅದರಿಂದ ಬರುವ ಆದಾಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲ. ರಂಗನಾಥ್ ಅವರು 10ನೇ ವಯಸ್ಸಿನಲ್ಲಿದ್ದಾಗಲೇ ಸಂಸಾರದ ನೋಗ ಅವರ ಮೇಲೆ ಬಿತ್ತು, ಅಂದಿನಿಂದ ಹುಡುಗನ ದಿನಚರಿಯೇ ಬದಲಾಗಿತ್ತು. ಮುಂಜಾನೆ 4 ಗಂಟೆಗೇ ಆತ ಎದ್ದೇಳುತ್ತಿದ್ದ. ಸ್ನಾನ ಮಾಡಿ ಹೊರಟನೆಂದರೆ ಅಂದಿನ ಚಟುವಟಿಕೆ ಆರಂಭವಾದಂತೆ. 7 ಗಂಟೆವರೆಗೆ ಪೇಪರ್‌ ಹಾಕುತ್ತಿದ್ದ. ಮತ್ತೆ ಮನೆಗೆ ಬಂದು ಪುನಃ ಹಾಲು ಕೊಡಲು ಹೋಗುತಿದ್ದ . ಅಲ್ಲಿ ಅದು- ಇದು ಕೆಲಸ ಮಾಡಿ ಅಲ್ಲೇ ತಿಂಡಿ ತಿಂದು ಕಾಲೇಜಿಗೆ ತೆರಳುತ್ತಿದ್ದ. ಮತ್ತೆ ರಾತ್ರಿ ಪೇಪರ್ ಕಲೆಕ್ಷನ್ ಕೆಲಸವಿರುತ್ತಿತ್ತು. ಇಷ್ಟಾಗಿಯೂ ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ . ಬಿಡುವಿನ ಸಮಯದಲ್ಲಿ ಏಕಾಗ್ರತೆಯಿಂದ ಅಧ್ಯಯನ ನಡೆಸುತ್ತಿದ್ದ. ಹೀಗೆ ಆತ ಎಸೆಸೆಲ್ಸಿಯಲ್ಲೂ ಉತ್ತಮ ಅಂಕ ಗಳಿಸಿದ್ದ ಪಿಯುನಲ್ಲೂ ಸಾಧನೆ ತೋರಿದ್ದ.

ಇಷ್ಟೆಲ್ಲ ಕಷ್ಟಪಡುವ ಆತ ಒಂದು ದಿನವಾದರೂ ಗೊಣಗಿದ್ದಾಗಲೀ, ಸಾಕಪ್ಪ ಜೀವನ ಎಂದು ಹತಾಶೆ ಭಾವ ತೋರಿದ್ದಾಗಲಿ ಯಾರು ಕಂಡಿಲ್ಲ. ಹೌದು, ಕೆಲವರೇ ಹಾಗೆ. ತಾವು ಬೇಗೆಯಲ್ಲಿ ಬೇಯುತ್ತಿದ್ದರೂ ತಮ್ಮ ಬಳಿಗೆ ಬರುವವರಿಗೆ ಕೈ ತುಂಬಾ ಸಿಹಿ ಹಣ್ಣು ಕೊಡುವಂತಹವರು.
ಮುಂದೆ ಆ ಹುಡುಗ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾನೆ. ಪ್ರೌಢಾವಸ್ಥೆಗೆ ಬಂದ ಮೇಲೆ ಸರ್ಕಾರಿ ಕೆಲಸಕ್ಕೆ ಕಾಯದೆ ಸ್ವಂತ ದುಡಿಮೆ ಪ್ರಾರಂಭಿಸುತ್ತಾರೆ . ಸ್ನೇಹಿತರೊಟ್ಟಿಗೆ ಸೇರಿ ಚಿಕ್ಕದಾಗಿ ಫೈನಾನ್ಸ್ ಆರಂಭಿಸುತ್ತಾರೆ .ಹಾಗೆ ಜನ ಸ್ನೇಹಿಯಾಗಿ ಬಣಕಲ್ ನಲ್ಲಿ ಗುರುತಿಸಿಕೊಳ್ಳುತ್ತಾರೆ ನಂತರ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ದಿಸಿ ಗೆದ್ದು ಉಪಾಧ್ಯಕ್ಷರಾಗಿ ಆಯ್ಕೆ ಆಗಿ ಜನ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ .ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಇವರಿಗೆ ಸರಿ ಹೊಂದುತ್ತದೆ . ಇವತ್ತು ಅವರು ಎಷ್ಟೇ ಬೆಳೆದರೂ ತನ್ನನ್ನು ಬೆಂಬಲಿಸಿದ ಕೆಲ ವ್ಯಕ್ತಿಗಳನ್ನು ಇಂದಿಗೂ ನೆನೆಯುತ್ತಾರೆ ಜಯಂತ್ ಬಾಳಿಗಾರ್ ಅವರ ಮಾರ್ಗದರ್ಶನ ಅವರಿಗೆ ಸ್ಫೂರ್ತಿ.ಈ ಕಥೆ ಕೇಳಿದರೆ ಅತ್ಯಂತ ಸಿನಿಮಾಯವಾಗಿದೆ ಅನ್ನಿಸುತ್ತದೆ ಅಲ್ಲವೇ , ಇಲ್ಲ ಯಾವುದೋ ಸಿನಿಮಾ ಇದ್ದಂಗೆ ಇದೆ ಅಂತ ಅನಿಸುವುದು ಸಹಜ. ಆದರೆ ಇದು ನಿಜ ಅವರ ಜೀವನದಲ್ಲಿ ನಡೆದ ಪ್ರಸಂಗ ಅವರು ಬೆಳೆದ ರೀತಿ ಎಲ್ಲರಿಗೂ ಮಾದರಿ.ಕಷ್ಟ ಪಟ್ಟರೆ ಫಲ ಖಂಡಿತ ಎಂಬುದಕ್ಕೆ ಇವರೇ ಸಾಕ್ಷಿ.ಅವರ ಮುಂದಿನ ಪಯಣ ಯಶಸ್ಸಿನಿಂದ ಸಾಗಲಿ ಎಂಬುದೇ ಪತ್ರಿಕೆಯ ಆರೈಕೆ..
ವರದಿ: ಸೂರಿ ಬಣಕಲ್