ಗಣೇಶ ಹಬ್ಬವೆಂದರೆ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಸಂಭ್ರಮ. ಗಣೇಶ ಚತುರ್ಥಿ ಎಂದರೇ ಈ ದಿನ ಗಣೇಶನು ಆನೆಯ ಶಿರದೊಂದಿಗೆ ಪುನರುತ್ತಾನಗೊಂಡ ದಿನವಾಗಿದೆ.ಶಿವ ದಂಪತಿಯರ ಮಗನಾದ ಗಣೇಶನು ಬುದ್ದಿವಂತಿಕೆ, ಜ್ಞಾನ ಮತ್ತುಅದೃಷ್ಟದ ದೇವರಾಗಿದ್ದಾನೆ ಮತ್ತು ವಿಘ್ನ ನಿವಾರಕನಾಗಿದ್ದಾನೆ. ಶುಭ ದ್ಯೇಯದೊಂದಿಗೆ ಎಲ್ಲಾ ಭಕ್ತರ ಮನೆಮನೆಗೂ ಸಮೃದ್ಧಿ, ಸುಖ ಕರುಣಿಸುತ್ತಾನೆ. ಈ ಹಬ್ಬವನ್ನು ದೇಶದ ಹಲವೆಡೆ ಆಚರಿಸಿದರೂ ಸಹ ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆ ತನ್ನದೇ ಆದ ವಿಶಿಷ್ಟ ಆಕರ್ಷಣೆ ಮತ್ತು ವೈಭವಗಳನ್ನು ಹೊಂದಿದೆ. ಇಂದು ಬುಧವಾರ ಬಣಕಲ್ ಗ್ರಾಮದಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬಣಕಲ್, ಸುಭಾಷ್ ನಗರ, ಇಂದಿರಾನಗರ,ಸಬ್ಳಿ, ಮತ್ತಿಕಟ್ಟೆ,ಹೀಗೆ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳಿಗೆ ಪ್ರತಿನಿತ್ಯ ಬಗೆಬಗೆಯ ಪೂಜೆಗಳು ನಡೆದವು.ನಾನಾ ಆಕಾರ ಅವತಾರಗಳಲ್ಲಿ ಮೂಡಿಬಂದಿರುವ ಮೂರ್ತಿಗಳು ಎಲ್ಲರ ಗಮನ ಸೆಳೆದವು.
ಇಂದಿನಿಂದ ಪ್ರತಿದಿನ ಗಣೇಶೋತ್ಸವ ಸಮಿತಿಯವರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಬ್ಬಕ್ಕೆ ಮೆರಗು ನೀಡುತ್ತಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗಳಲ್ಲಿ ಕೂಡ ವಿನಾಯಕನ ಆರಾಧನೆ ಬಹು ಜೋರಿನಿಂದಲೇ ನಡೆದಿದ್ದು, ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೋದಕ, ಕಡುಬು ಮಾಡಿ ನೈವೇದ್ಯ ಅರ್ಪಿಸುವ ಜತೆಗೆ ರಜೆಯ ಮೋಜಿನಲ್ಲಿ ಜನರು ಹಬ್ಬದೂಟವನ್ನು ಸವಿದರು.
ನಾಗರಿಕರು ಕುಟುಂಬ ಸಮೇತ ನಗರದಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದರು. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು.