ಬಣಕಲ್ ಸುತ್ತ ಮುತ್ತ ಮುಂದುವರೆದ ಮಳೆ ಅಬ್ಬರ ಗಾಳಿ ಮಳೆಗೆ ಜನ ತತ್ತರ

ಬಣಕಲ್ :ಮಳೆ ಅಬ್ಬರ ಮಲೆನಾಡಿನಲ್ಲಿ ಮುಂದುವರೆದಿದ್ದು,ಕಳೆದ ರಾತ್ರಿಯಿಂದ ಮಳೆಯೊಂದಿಗೆ ಗಾಳಿ ಸಹ ಬೀಸುತ್ತಿದ್ದು ಜನ ಕಂಗಾಲಾಗಿದ್ದಾರೆ ಬಣಕಲ್ ನಲ್ಲಿರುವ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿ ನೀರಿನ ಹರಿವು ಹೆಚ್ಚಳಗೊಂಡು ಅಪಾಯದ ಮಟ್ಟ ಮುಟ್ಟಿವೆ
ಅನಾಹುತಗಳ ಸರಣಿ ಮುಂದುವರಿದಿದ್ದು, ಜನತೆ ಪ್ರತಿ ಕ್ಷಣವನ್ನೂ ಆತಂಕದಲ್ಲೇ ಕಳೆಯುವಂತಾಗಿದೆ.
ನಿರಂತರ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿರುವ ಕಾರಣ ಧರೆ ಕುಸಿತ, ಮನೆಗಳು ಹಾಗೂ ರಸ್ತೆಗಳಿಗೆ ಹಾನಿ ಸಂಭವಿಸುತ್ತಲೇ ಇದೆ. ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಾಣುತ್ತಲೇ ಇಲ್ಲ.
ಗಾಳಿ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಗೋಡೆ ಕುಸಿತ ಘಟನೆ ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಸಬ್ಳಿ ಬಣಕಲ್ ಸುತ್ತ ಮುತ್ತಲ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಹಾನಿಗೀಡಾಗಿದ್ದು, ಮನೆ ಕಳೆದುಕೊಂಡ ನಿವಾಸಿಗಳು ಬೀದಿಗೆ ಬಿದ್ದಂತಾಗಿದೆ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದೇ ಸಮಾಧಾನದ ಸಂಗತಿ
ಮಳೆ ಕಾರಣಕ್ಕೆ ಮಲೆನಾಡು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ನೀಡಿದ್ದ ರಜೆ ಮಂಗಳವಾರ ಮುಕ್ತಾಯವಾಗಿದೆ. ಮಳೆ ಇನ್ನೂ ಮುಂದುವರೆದು ಅನಾಹುತಗಳು ಸಂಭವಿಸುತ್ತಲೇ ಇದೆ. ಆದರೆ ಶಾಲೆಗಳನ್ನು ಆರಂಭಿಸುವ ಕುರಿತು ಜಿಲ್ಲಾಡಳಿತ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಶಾಲಾ ಆಡಳಿತ ಮಂಡಳಿ ಗಾಳಿ ಮಳೆ ಇದ್ದ ಕಾರಣ ಬಣಕಲ್ ಪ್ರೌಢ ಶಾಲೆ, ರಿವರ್ ವ್ಯೂ, ಉರ್ದು ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದ್ದರು.