ಬಣಕಲ್ :ಬಣಕಲ್ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದ ಗೊತ್ತು ಗುರಿಯಿಲ್ಲದೆ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ತೀವ್ರವಾಗಿದ್ದು ಬಣಕಲ್ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತಿದ್ದಾರೆ . ಅನಿಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ವ್ಯಾಪಾರಿಗಳು, ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.
ಆಗಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ವ್ಯಾಪಾರಿಗಳು, ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು, ವರ್ಕ್ ಶಾಪ್, ಕಂಪ್ಯೂಟರ್, ಜೆರಾಕ್ಸ್ ಸೆಂಟರ್ಗಳು ಹಾಗೂ ವಿದ್ಯುತ್ ವಸ್ತುಗಳ ರಿಪೇರಿ ಅಂಗಡಿಗಳಿಗೆ ಕೆಲಸಗಳು ಸಾಗುತ್ತಿಲ್ಲ.
ಗ್ರಾಮಸ್ಥ ಕೆಂಬಲ್ ಮಠ ಲಕ್ಷ್ಮಣ್ ಗೌಡ ಮಾತನಾಡಿ ಬಣಕಲ್ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಪೂರೈಕೆಗೂ ತೊಂದರೆಯಾಗಿದೆ ಲೋಡ್ ಶೆಡ್ಡಿಂಗ್ ಇಲ್ಲದಿದ್ದರೂ ಬೆಳಗ್ಗೆ ಯಿಂದ ಸಂಜೆವರೆಗೂ ವಿದ್ಯುತ್ ಇರುವುದಿಲ್ಲ ಮಳೆ ಬಂದಾಗ ಬಣಕಲ್ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಹರಿದಿದ್ದರೆ ಮರ ಬಿದ್ದಿದ್ದರೆ ತಿಳಿಸಲು ಕರೆ ಮಾಡಿದರೆ ಯಾರೊಬ್ಬರೂ ಸ್ಪಂದಿಸುವುದಿಲ್ಲ ಎಂದು ದೂರಿದರು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು, ರೈತರು, ಅಗತ್ಯ ದಾಖಲಾತಿಗಳಾದ ಆದಾಯ ದೃಢೀಕರಣ ಪಟ್ಟಿ, ಜಾತಿ ಪ್ರಮಾಣಪತ್ರ, ಜಮೀನು ಅಗತ್ಯ ದಾಖಲಾತಿಗಳಿಗಾಗಿ ಜನತೆ ದಿನನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದೆ.ಅಲ್ಲದೇ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಮೆಸ್ಕಾಂಗೆ ಮುತ್ತಿಗೆ ಹಾಕಲಾಗುವುದು ಎಂದರು.