ಹೈಕೋರ್ಟ್ ತೀರ್ಪು ಹಿನ್ನಲೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಸಿದ ಮೂಡಿಗೆರೆ ಬಜರಂಗದಳ

ಮೂಡಿಗೆರೆ: ಹಿಂದೂ, ಮುಸಲ್ಮಾನರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಪಾದುಕೆ ಪೂಜೆಗೆ ಮೌಲ್ವಿ ನೇಮಕ ಮಾಡಿರುವ ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟ್‌ ರದ್ದು ಮಾಡಿದೆ.ಈ ಮೂಲಕ ದತ್ತಪೀಠ ಸಮಿತಿಗೆ ದತ್ತಪೀಠ ವಿಚಾರದಲ್ಲಿ ಗೆಲುವು ದೊರಕಿದೆ.ದತ್ತಪೀಠದಲ್ಲಿ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಲೆದೋರಿದ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ 2018 ರಲ್ಲಿ ದತ್ತಪೀಠದ ಪೂಜೆಗೆ ಮೌಲ್ವಿಯೋರ್ವರನ್ನು ನೇಮಕ ಮಾಡಿತ್ತು. ಧಾರ್ಮಿಕ ದತ್ತಿ ಇಲಾಖೆಯ ಆದೇಶಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದ ದತ್ತಪೀಠ ಸಮಿತಿ, ಈ ಕುರಿತು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿಯೊಂದನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆದಿದೆ.ಇಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್.ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಮೌಲ್ವಿ ನೇಮಕ ಆದೇಶವನ್ನು ರದ್ದು ಪಡಿಸಿದೆ. ಈ ಮೂಲಕ ದತ್ತಪೀಠ ಸಮಿತಿಗೆ ಹೈಕೋರ್ಟ್‌ನಲ್ಲಿ ಜಯ ದೊರೆಕಿದ ಈ ಸಂದರ್ಭದಲ್ಲಿ ಮೂಡಿಗೆರೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.