ಮೂಡಿಗೆರೆ: ಮಲೆ ನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ವ್ಯಾಪಕವಾಗಿದ್ದು ಪ್ರತೀ ದಿನ ನಡೆಯುವ ಕಾಡು ಪ್ರಾಣಿಗಳ ದಾಳಿಗೆ ಮಲೆನಾಡಿನ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಕಾಡನ್ನು ಬಿಟ್ಟು ಆಹಾರವನ್ನು ಹುಡುಕುತ್ತ ನಾಡಿನ ಕಡೆ ಮುಖ ಮಾಡುತ್ತಿವೆ.
ಹಂದಿ ಕಾಡಾನೆ ಕಾಡೆಮ್ಮೆ ಆಕ್ರಮಣದಿಂದ ಅದೆಷ್ಷೊ ಮಂದಿ ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ ಬಣಕಲ್ ವಿಲೇಜ್, ಬಾಳೂರು, ಬಸನಿ, ಹೆಗ್ಗುಡ್ಲು, ಕುಂದೂರು,ಕೋಗಿಲೆ ಹೀಗೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಡು ಹಂದಿ ಆನೆ ಕಾಡೆಮ್ಮೆಗಳ ಉಪಟಳ ವ್ಯಾಪಕವಾಗಿದ್ದು ಜನ ಭಯದಿಂದಲೇ ಕಾಫಿ ತೋಟಗಳಲ್ಲಿ ಕೆಲಸ ಮಾಡುವಂತಾಗಿದೆ.
ಕಳೆದೊಂದು ವಾರದಲ್ಲಿ ಗ್ರಾಮದ ಸುತ್ತ ಮುತ್ತ ಕಾಡು ಹಂದಿ ದಾಳಿಗೆ ಜನ ಭಯಭೀತರಾಗಿದ್ದಾರೆ ಎರಡು ದಿನದ ಹಿಂದೆ ಬಣಕಲ್ ನ ವಿಲೇಜ್ ಎಂಬಲ್ಲಿ ಖಾಸಗಿ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಲವೀಶ ಎಂಬ ಮಹಿಳೆಯ ಮೇಲೆ ಹಂದಿ ದಾಳಿ ನಡೆಸಿದೆ ದಾಳಿಗೆ ಆಕೆಯ ಕಣ್ಣಿನ ಭಾಗಕ್ಕೆ ಬಲವಾದ ಗಾಯವಾಗಿದೆ.

ಅದಾದ ಮರುದಿನ ಬಾಳೂರು ಹೋಬಳಿಯ ಕೂವೆ ಗ್ರಾಮದ ರಾಜಶೇಖರ್ ಎಂಬವರು ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡು ಹಂದಿ ದಾಳಿ ನಡೆಸಿದ್ದು ತಲೆ ಎದೆ ಸೊಂಟ ಮತ್ತು ಕೈ ಕಾಲುಗಳಿಗೆ ತೀವ್ರವಾಗಿ ಹಂದಿ ದಾಳಿ ನಡೆಸಿತ್ತು.

ಕಳೆದವಾರ ಕುಂದೂರು -ಸಾರ್ಗೋಡ್ ರಸ್ತೆಯಲ್ಲಿ ಕಾಡಾನೆಯೊಂದು ಓಮಿನಿ ಕಾರನ್ನು ಪಲ್ಟಿ ಮಾಡಿ ಪುಡಿ ಮಾಡಿದ ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಹೀಗೆ ಅದೆಷ್ಷೊ ಮಂದಿ ಕೃಷಿಕರು ಕೂಲಿ ಕಾರ್ಮಿಕರು ಕಾಡು ಪ್ರಾಣಿಗಳ ಉಪಟಳದಿಂದ ತೊಂದರೆಗೀಡಾಗಿದ್ದಾರೆ. ಈಗ ನಾಡಿನಲ್ಲಿ ಕಾಡುಹಂದಿಯ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗಿದ್ದು, ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳಲ್ಲಿ ಹಂದಿ ದಾಳಿಯಿಂದ ಕೆಲವರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದೆ. ಆದರೆ ಸರಕಾರ ಅಥವಾ ಇಲಾಖೆಯಾಗಲಿ ಗಾಯಾಳುಗಳಿಗೆ ಪರಿಹಾರದ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಇದರಿಂದ ಗಾಯಾಳುಗಳು , ಆಸ್ಪತ್ರೆಯಲ್ಲಿ ದಿನದೂಡುವಂತಾಗಿದೆ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಬಡ ಕಾರ್ಮಿಕರು ಆಸ್ಪತ್ರೆ ವೆಚ್ಚಕ್ಕೆ ಪರಿತಪಿಸುವಂತಾಗಿದೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಇವರ ನೆರವಿಗೆ ಬರಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.