ಕನ್ನಡ ಜ್ಯೋತಿ ರಥಕ್ಕೆ ಚಿಕ್ಕಮಗಳೂರು ಗಡಿಯಲ್ಲಿ ಸ್ವಾಗತ

ಚಿಕ್ಕಮಗಳೂರು:ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ರಾಜ್ಯಾದ್ಯಾಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯ ರಥವನ್ನು ಚಿಕ್ಕಮಗಳೂರು ಗಡಿ ಭಾಗವಾದ ಮಾಗಡಿ ಹ್ಯಾಂಡ್ ಪೋಸ್ಟ್ ನಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ತಹಶೀಲ್ದಾರ್ ಸುಮಂತ್, ಅಧಿಕಾರಿಗಳಾದ ಶ್ರೀನಿವಾಸ್, ಸಿಬ್ಬಂದಿ ನವದೀಪ್, ಮಲ್ಲಿಕಾರ್ಜುನ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಸದಸ್ಯರು ಇದ್ದರು.ಇಂದು (ಸೆಪ್ಟೆಂಬರ್ ೨೧ ಶನಿವಾರ) ಜಿಲ್ಲಾಧಿಕಾರಿ ಕಚೇರಿಯಿಂದ ಜಿ,ಪಂ ವರೆಗೆ ವಿಜೃಂಭಣೆಯ ರಥಯಾತ್ರೆಇಂದು ಬೆಳಿಗ್ಗೆ ೯ ಗಂಟೆಗೆ ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಪಂಚಾಯತಿಯವರೆಗೆ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಸಾಗಲಿದ್ದು ಸಾಂಸ್ಕೃತಿಕ ವಲಯದ ಪ್ರಮುಖರು, ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಥಯಾತ್ರೆಯೂ ಮುಂದುವರೆದು ಉದ್ದೇಬೋರನಹಳ್ಳಿ, ಸಖರಾಯಪಟ್ಟಣ, ಸರಸ್ವತಿಪುರ ಮಾರ್ಗವಾಗಿ ಕಡೂರು ಕಡೆಗೆ ಸಾಗಲಿದೆ.ಸೆಪ್ಟೆಂಬರ್ ೨೨ ರಂದು ಕಡೂರು, ೨೩ ಕ್ಕೆ ತರೀಕೆರೆ, ೨೪ ಕ್ಕೆ ಎನ್.ಆರ್ ಪುರ, ೨೫ ಕ್ಕೆ ಕೊಪ್ಪ, ೨೬ ರಂದು ಮೂಡಿಗೆರೆಗೆ ರಥಯಾತ್ರೆ ಬರಲಿದೆ. ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣ ಸಲಿದೆ.