ಒಂದೇ ಮನೆಯಲ್ಲಿ 3ಕ್ಕಿಂತ ಹೆಚ್ಚು ಕೊರೋನಾ ಕೇಸ್ ಇದ್ದರೆ ಸೀಲ್ ಡೌನ್!

ಬೆಂಗಳೂರು: ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಕೇಸುಗಳು ಸಂಖ್ಯೆ ಇದ್ದಕ್ಕಿದ್ದಂತೆ ಏರಿಕೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದ್ದು, ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಕೊರೊನಾ(COVID-19) 3ನೇ ಅಲೆಯ ಆತಂಕ ಶುರುವಾಗಿದೆ. ಅನ್ ಲಾಕ್ ಬಳಿಕ ಸೈಲೆಂಟ್ ಆಗಿಯೇ ಕೊರೊನಾ ನಾಗಾಲೋಟ ಶುರುವಾಗಿದ್ದು, ರಾಜಧಾನಿಗೆ ಹೊಸ ಗಂಡಾಂತರ ಎದುರಾಗಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ(Bengaluru)ಒಂದೇ ಮನೆಯಲ್ಲಿ 3ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದರೆ ಆ ಮನೆಯನ್ನೇ ಸೀಲ್ ಡೌನ್ ಮಾಡಲಾಗುತ್ತಿದೆ. ಅಲ್ಲದೆ ಒಂದೇ ಕಡೆ 10 ಕೊರೊನಾ ಸೋಂಕಿತರು ಪತ್ತೆಯಾದರೂ ಕೂಡ ಆ ಪ್ರದೇಶವನ್ನು ಬಿಬಿಎಂಪಿ ಸೀಲ್ ಡೌನ್ ಮಾಡುತ್ತಿದೆ, ಸೀಲ್ ಡೌನ್ ಆದ ಮನೆಗಳಿಗೆ ಬಿಬಿಎಂಪಿಯೇ ಅಗತ್ಯವಸ್ತುಗಳನ್ನು ಪೂರೈಕೆ ಮಾಡಲಿದೆ, ಸೋಂಕಿತರು ಇರುವ 100 ಮೀ. ಪ್ರದೇಶ, ರಸ್ತೆಗಳು, ಅಕ್ಕಪಕ್ಕದ ಮನೆಗಳನ್ನೂ ಕೂಡ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಗುತ್ತಿರುವ ಕೋವಿಡ್-19(COVID-19) ಪ್ರಕರಣಗಳಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 3ನೇ ಅಲೆಯ ಆತಂಕ ಕೂಡ ಹೆಚ್ಚಾಗಿದ್ದು, ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶಗಳನ್ನು ಬಿಬಿಎಂಪಿ ಸಿಬ್ಬಂದಿ ಬ್ಯಾರಿಕೇಡ್, ರೇಡ್ ಟೇಪ್ ಗಳ ಮೂಲಕ ಸೀಲ್ ಡೌನ್ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಮಹಾಮಾರಿಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರದ ಅಧಿಕಾರಿಗಳು ಈಗಾಗಲೇ ಒಂದು ಹಂತದ ಸಭೆ ನಡೆಸಿದ್ದಾರೆ. ರಾಜಧಾನಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಬಿಬಿಎಂಪಿಗೆ ವಹಿಸಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪರಿಸ್ಥಿತಿಗೆ ತಕ್ಕಂತೆ ಯಾವುದೇ ಕ್ರಮ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಬಿಬಿಎಂಪಿ(BBMP)ಗೆ ನೀಡಲಾಗಿದೆ. ವೀಕೆಂಡ್ ಇರುವ ಕಾರಣ ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಜನರು ಬೇರೆ ಬೇರೆ ಭಾಗಗಳಿಗೆ ಪ್ರಯಾಣ ಬೆಳೆಸಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂವನ್ನು ಮತ್ತೆ ಜಾರಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೇರಳದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ವೀಕೆಂಡ್ ಕರ್ಫ್ಯೂ ಜಾರಿ ಮಾಡಿದರೆ ಜನರ ಓಡಾಟಕ್ಕೆ ಬ್ರೇಕ್ ಹಾಕಬಹುದು. ಈ ಮೂಲಕ ಗುಂಪು ಗುಂಪಾಗಿ ಸೇರಿ ಕೊರೊನಾ ಹರಡುವುದನ್ನು ತಪ್ಪಿಸಬಹುದು ಎಂದು ಬಿಬಿಎಂಪಿ ಯೋಚಿಸುತ್ತಿದೆ. ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಆಯುಕ್ತರೇ ಕ್ರಮ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯವನ್ನು ಸರ್ಕಾರ ನೀಡಿದೆ. ಕಂಟೇನ್ಮೆಂಟ್, ಸೀಲ್ ಡೌನ್, ಕರ್ಫ್ಯೂ ಸಂಬಂಧ ನಿರ್ಧಾರ ಹೀಗೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಬಹುದಾಗಿದೆ. ಎಲ್ಲವೂ ಸರಿಯಾಯ್ತು ಅನ್ನುವಷ್ಟರಲ್ಲಿ ರಾಜಧಾನಿಯ ಗಲ್ಲಿ ಗಲ್ಲಿಗೂ ಕೊರೊನಾ ಸೋಂಕು(CoronaVirus )ಹಬ್ಬುತ್ತಿದೆ. ಹೀಗಾಗಿ ಬೆಂಗಳೂರಿಗೆ ಮತ್ತೆ ಕರ್ಫ್ಯೂ, ಸೀಲ್ ಡೌನ್ ಭೀತಿ ಶುರುವಾಗಿದೆ. ನೈಟ್ ಕರ್ಫೂ ಜಾರಿಯಾಗುತ್ತಾ..? ಅಥವಾ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಾ ಅಂತಾ ಸಿಲಿಕಾನ್ ಸಿಟಿ ಜನರು ತಲೆಕೆಡಿಸಿಕೊಂಡಿದ್ದಾರೆ.