ಬಣಕಲ್: ರೈತರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೇ ಇರುತ್ತಾನೆ. ಆತನ ಸಂಕಟ, ನೋವು, ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ ಮಾಡುತ್ತಲೇ ಇರುತ್ತಾನೆ. ಅಂಥ ನಿಸ್ವಾರ್ಥಿಯ ರೈತನನ್ನು ನೆನೆಯುವ ಪ್ರಯತ್ನ ಪತ್ರಿಕೆ ಮಾಡುತ್ತಿದೆ .
ಮಲೆನಾಡಿನಲ್ಲಿ ಭತ್ತ ಬೆಳೆಯುವುದು ಸವಾಲಿನ ಕೆಲಸವಾಗಿದ್ದು, ಈಗ ಈ ಬೆಳೆಯ ಬಗ್ಗೆ ರೈತರು ಆಸಕ್ತಿಯನ್ನು ಕಡಿಮೆ ಮಾಡಿದ್ದಾರೆ. ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಹೆಚ್ಚು ಆದಾಯ ತರಬಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿ ಒಂದು ಕಾಲದಲ್ಲಿ ರೈತರ ಪಾಲಿಗೆ ಮೂಲ ಕೃಷಿಯೇ ಭತ್ತ. ಆದರೆ ನಗರೀಕರಣ, ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತ ಕೃಷಿಯೇ ಕಣ್ಮರೆಯಾಗುತ್ತಿದ್ದು, ಹೊಲ- ಗದ್ದೆ ಹೊಂದಿರುವ ರೈತರೇ ಅಪರೂಪವಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಬಣಕಲ್ ಗ್ರಾಮದ ಸುಣ್ಣದ ಗೂಡು ನಿವಾಸಿ ಸುರೇಶ್ ಗೌಡ ಅವರಿಗೆ ಈಗಲೂ ಭತ್ತವೇ ಮೂಲ ಕೃಷಿ. 45 ವರ್ಷ ವಯಸ್ಸಿನ ಸುರೇಶ್ ಗೌಡ ಅವರದ್ದು ಅಪ್ಪಟ ಕೃಷಿಕ ಕುಟುಂಬ. ತಂದೆ ಕಲ್ಲೇಗೌಡ ,ತಾಯಿ ಸೀತಮ್ಮ ಅವರ ಆರು ಮಕ್ಕಳಲ್ಲಿ ಇವರು 5ನೇ ಅವರೆ ಇವರು . ತಮ್ಮ15ನೇ ವಯಸ್ಸಿನಲ್ಲೆ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡರು. ಭತ್ತ ಕೃಷಿಯಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ ಅಂದರೆ, ತೋಟಗಾರಿಕಾ ಬೆಳೆಗಳ ಭರಾಟೆಯಲ್ಲಿ ಭತ್ತದ ಕೃಷಿ ನಷ್ಟ ಎಂದು ಹೇಳುವವರಿಗೆ ಇವರು ದೊಡ್ಡ ಸ್ಫೂರ್ತಿಯಾಗಿದ್ದಾರೆ. ದನಗಳಿಗೆ ಹಿಂಡಿ ಹೆಚ್ಚು ಹಾಕದೇ ಹಸಿರು ಹುಲ್ಲು ಬೆಳೆಸುವ ಮೂಲಕ ಅದಕ್ಕೆ ಹೆಚ್ಚು ಪ್ರಾಶಸ್ಥ್ಯ ನೀಡುತ್ತಿದ್ದಾರೆ.
ಸುರೇಶ್ ಗೌಡರಿಗೆ ಒಟ್ಟು 5ಎಕರೆ ಜಾಗವಿದೆ. ಮುಂಗಾರು ಮಳೆ ಆಧರಿಸಿ ಒಟ್ಟು 5ಎಕರೆ ಜಾಗದಲ್ಲಿ ಭತ್ತ ಕೃಷಿ ಮಾಡುತ್ತಿದ್ದಾರೆ. ಮಡದಿಯ ಸಾಥ್
ಟಿಲ್ಲರ್ ಮೂಲಕ ಉಳುಮೆಯನ್ನು ಸುರೇಶ್ ಗೌಡರು ಸ್ವತಃ ಮಾಡುತ್ತಿದ್ದಾರೆ. ಅವರಿಗೆ ಅವರು ಟಿಲ್ಲರ್ನಲ್ಲಿ ಉಳುಮೆ ಮಾಡುವಾಗ ಮಡದಿ ಪ್ರಮೀಳಾ ಸಾಥ್ ನೀಡುತ್ತಿದ್ದಾರೆ . ಮತ್ತೂಂದು ಗದ್ದೆಯಲ್ಲಿ ಹಾರೆ ಹಿಡಿದು ಮಣ್ಣು ತೆಗೆದು, ಗದ್ದೆಯ ಬದುವನ್ನು ಕಟ್ಟುವಲ್ಲಿ ಸಹಕಾರ ನೀಡುತ್ತಿದ್ದಾರೆ. ಭತ್ತದ ಬೇಸಾಯದ ಕಾರ್ಯಕ್ಕೆ ಗದ್ದೆಗೆ ಇಳಿದು ಸಹಕಾರ ನೀಡುತ್ತಾರೆ ಎಂದರೆ ಅದು ಅವರಿಗೆ ಅದರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.
ಬೆಳೆದ ಭತ್ತವನ್ನು ಮಿಲ್ಗೆ ನೀಡಿ ತಮಗೆ ಬೇಕಾದ ಅಕ್ಕಿಯನ್ನು ಪಡೆದುಕೊಂಡು ಸುಖ ಜೀವನ ಸಾಗಿಸುತ್ತಿದ್ದಾರೆ.
ಮಡದಿ ಕೂಡ ಭತ್ತ ಬೆಳೆಯುವುದಕ್ಕೆ ಸಾಥ್ ಕೊಡುವುದರಿಂದ ನಮಗೆ ಭತ್ತ ಬೆಳೆಯುವುದಕ್ಕೆ ತಗಲುವ ಖರ್ಚು ಕೂಡ ಕಡಿಮೆಯಾಗುತ್ತದೆ. ಭತ್ತದ ಕೃಷಿ ನೆಮ್ಮದಿ ಜೀವನ ನೀಡಿದೆ ಅಪ್ಪ ನೀಡಿದ ಕೃಷಿ ಭೂಮಿಯನ್ನು ಕಾಪಾಡಿಕೊಂಡು ಹೋಗುತ್ತಿದ್ದೇವೆ ಎಂಬ ತೃಪ್ತಿ ಇದೆ.ಭತ್ತ ಬೆಳೆಯುವುದು ನಮ್ಮ ಪರಂಪರೆ. ಇದನ್ನು ಲಾಭ ನಷ್ಟದ ವಿಚಾರವಾಗಿ ನೋಡಬಾರದು. ಖಂಡಿತ ನಮ್ಮಲ್ಲಿ ಭತ್ತ ಲಾಭದಾಯಕ ಬೆಳೆಯಲ್ಲ ಎಂದು ತಿಳಿದು ಭತ್ತ ಬೆಳೆಯುವುದನ್ನೇ ರೈತರು ನಿಲ್ಲಿಸಿದರೆ ಮುಂದೆ ಯಾವುದೋ ದೇಶದಲ್ಲಿ ಬೆಳೆದ ಪ್ಲಾಸ್ಟಿಕ್ ಅಕ್ಕಿಯನ್ನು ತಿನ್ನೋ ಪರಿಸ್ಥಿತಿ ಬರುತ್ತದೆ. ಎಂಬುದು ರೈತ ಸುರೇಶ್ ಗೌಡರ ಅಭಿಪ್ರಾಯ. ಭತ್ತದ ಕೃಷಿಗೆ ಸಾವಯವ ಗೊಬ್ಬರವೇ ಉಪಯೋಗ ಮಾಡಲಾಗುತ್ತದೆ. ಸಾವಯವದಡಿ ಭತ್ತ ಬೆಳೆದರೆ ಪರಿಸರಕ್ಕೂ ಹಾನಿಯಿಲ್ಲ; ಆರೋಗ್ಯಕ್ಕೂ ತೊಂದರೆಯಿಲ್ಲ. ಭತ್ತದ ಕೃಷಿ ನಷ್ಟ ಎಂದು ಹೇಳುವವರಿಗೆ ಲಾಭವೂ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ.ಆಧುನಿಕ ಯುಗದಲ್ಲೂ ಭತ್ತ ಬೆಳೆಯಲ್ಲಿ ಆಸಕ್ತಿ ತೋರಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ರೈತ ಸುರೇಶ್ ಗೌಡರು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ .