ಚಿಕ್ಕಮಗಳೂರಿನ ಯುವಕ ಅವೇಶ್ ಅಹ್ಮದ್ ಸಾಧನೆ: ಯಶಸ್ವಿ ಶಕುಂತಲಾ ಉಪಗ್ರಹ ಉಡಾವಣೆ

ಚಿಕ್ಕಮಗಳೂರು :ಬೆಂಗಳೂರು ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ಅಪ್ ಪಿಕ್ಸೆಲ್, ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನೊಂದಿಗೆ ‘ಶಕುಂತಲಾ’ ಉಪಗ್ರಹವನ್ನು ಉಡಾವಣೆ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಅವೇಜ್ ಅಹ್ಮದ್‌ ಎಂಬ ಯುವಕ ಉಪಗ್ರಹ ಉಡಾವಣೆ ಮಾಡಿದ್ದಾರೆ
ಅವೇಜ್ ಅಹ್ಮದ್ ಹುಟ್ಟೂರು ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಮಗನ ಕನಸು ನನಸಾಗಿದೆ ಎಂದು ಪೋಷಕರು ಸಂತೋಷ ಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಖುದ್ದು ಅವೇಜ್ ಅಹ್ಮದ್‌ಗೆ ಪ್ರಧಾನಿ ಕರೆಮಾಡಿ ಶ್ಲಾಘಿಸಿದ್ದರು.

ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್ ಪಿಕ್ಸ್ಸೆಲ್ (ಕೇಂದ್ರ ಕಚೇರಿ ಬೆಂಗಳೂರು) ಏಪ್ರಿಲ್ 2022 ರಲ್ಲಿ ಶಕುಂತಲಾ ಎಂಬ ತನ್ನ ಮೊದಲ ವಾಣಿಜ್ಯ ಉಪಗ್ರಹವನ್ನು ಉಡಾವಣೆ ಮಾಡಿತು.

ಪೂರ್ಣ ಪ್ರಮಾಣದ ವಾಣಿಜ್ಯ ಉಪಗ್ರಹವನ್ನು ಯುಎಸ್‌ನ ಕೇಪ್ ಕ್ಯಾನವೆರಲ್‌ನಿಂದ ಎಲಾನ್ ಮಸ್ಕ್ ನಡೆಸುವ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿದೆ. ಉಡಾವಣೆಯು ಸ್ಪೇಸ್‌ಎಕ್ಸ್‌ನ ಟ್ರಾನ್ಸ್‌ಪೋರ್ಟರ್-4 ಮಿಷನ್ ಅಡಿಯಲ್ಲಿ ನಡೆದಿದೆ.

“ಶಕುಂತಲಾ’ ಉಪಗ್ರಹವು ಕಡಿಮೆ-ಕಕ್ಷೆಯ ಇಮೇಜಿಂಗ್ ಉಪಗ್ರಹವಾಗಿದ್ದು, ಇದುವರೆಗೆ ಬಾಹ್ಯಾಕಾಶಕ್ಕೆ ಹಾರಿದ ಅತ್ಯಧಿಕ-ರೆಸಲ್ಯೂಶನ್ ಹೈಪರ್‌ಸ್ಪೆಕ್ಟ್ರಲ್ ವಾಣಿಜ್ಯ ಕ್ಯಾಮೆರಾಗಳಲ್ಲಿ ಒಂದನ್ನು ಸ್ಥಾಪಿಸಲಾಗಿದೆ
ಇದು ಅರಣ್ಯನಾಶ, ನೈಸರ್ಗಿಕ ಅನಿಲ ಸೋರಿಕೆಗಳು, ಮಾಲಿನ್ಯ, ಬೆಳೆಗಳ ಆರೋಗ್ಯ ಕ್ಷೀಣಿಸುತ್ತಿರುವುದು, ಕರಗುತ್ತಿರುವ ಮಂಜುಗಡ್ಡೆಗಳು ಮತ್ತು ಹವಾಮಾನ ಬದಲಾವಣೆಯ ಮೌಲ್ಯಮಾಪನಗಳಿಗೆ ನಿರ್ಣಾಯಕವಾದ ಇತರ ಡೇಟಾದಂತಹ ಭೂಮಿಯ ಅಗೋಚರ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಬೇರೆಲ್ಲಾ ಉಪಗ್ರಹಗಳಿಗಿಂತ ಶೇಕಡಾ 50ರಷ್ಟು ಹೆಚ್ಚು ಡೇಟಾ ಬಿಡುಗಡೆ ಮಾಡಲಿದ್ದು, ಭೂಮಿಯ ಚಲನವಲನ, ಕೃಷಿ ಪ್ರಗತಿ, ಹವಾಮಾನದ‌ ಮಾಹಿತಿ ರವಾನಿಸುತ್ತದೆ. ಶಕುಂತಲಾ ಉಪಗ್ರಹ ಬಾಹ್ಯಾಕಾಶದಿಂದ ಹೆಚ್ಚು ವೇಗದಲ್ಲಿ ಮಾಹಿತಿ ನೀಡುವ ಉಪಗ್ರಹವಾಗಿದೆ.