ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್ ಪಿಎಫ್ ಯೋಧರಿಗೆ ಶ್ರದ್ದಾಂಜಲಿ

ಬಣಕಲ್ :ಇಂದು ಬಣಕಲ್ ಸಮುದಾಯ ಭವನದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟುಹೋರಾಡಿ ಮಡಿದ ವೀರ ಯೋಧರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ಹಾಗೂ ಬಣಕಲ್ ಆಟೋ ಸಂಘ ಸಾರ್ವಜನಿಕರಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ಗೌಡ ಮಾತನಾಡಿ ಈ ದಿನವನ್ನು ಬಹುಶ: ಭಾರತೀಯರು ಯಾರು ಮರೆಯಲು ಸಾಧ್ಯವೇ ಇಲ್ಲ.. ನೆಮ್ಮದಿಯಾಗಿ ಇದ್ದ ಭಾರತೀಯರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದ ದಿನ.ಭಾರತದ ಪ್ರತಿಯೊಬ್ಬ ಮನೆಮನೆಯ ಜನರು ಕಣ್ಣೀರಿಟ್ಟ ದಿನ..ಇಡೀ ವಿಶ್ವದಲ್ಲಿ ಪ್ರೇಮಿಗಳ ದಿನ ಮನೆ ಮಾಡಿದ್ರೆ, ಭಾರತದಲ್ಲಿ ಮಾತ್ರ ಉಗ್ರರ ಭೀಕರ ಅಟ್ಟಹಾಸಕ್ಕೆ ಯೋಧರ ಕೆಂಪು ನೆತ್ತರು ಹರಿಯುವಂತೆ ಮಾಡಿದ ಕರಾಳ ದಿನ ಎಂದರು.

ಮಾಜಿ ಸೈನಿಕರಾದ ದಿನೇಶ್ ರವರು ಮಾತನಾಡಿ ಕಳೆದ ಮೂರು ವರ್ಷದ ಹಿಂದೆ ಪಾಪಿ ಪಾಕಿಸ್ತಾನ ಹಾಗೂ ಕುತಂತ್ರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳ ಅಟ್ಟಹಾಸದಿಂದ 40 ಯೋಧರು ಪ್ರಾಣ ಕಳೆದುಕೊಂಡ ದುರ್ದೈವದ ದಿನ.
ಸರಿಯಾಗಿ 3 ವರ್ಷದ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಲಿನಲ್ಲಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನವೊಂದಕ್ಕೆ ಬಂದು ಅಪ್ಪಳಿಸಿತು. ಅಲ್ಲಿ ಏನಾಯಿತು ಎಂದು ಗೊತ್ತಾಗುವ ಹೊತ್ತಿಗೆ ಸೇನಾ ವಾಹನವೊಂದು ಹೊತ್ತಿ ಉರಿಯುತ್ತಿತ್ತು. ಇದರಲ್ಲಿ ಇದ್ದ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು ಇದು ದೇಶಕ್ಕೆ ಕರಾಳ ದಿನವಾಗಿತ್ತು ಎಂದರು.ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳು. ಆಟೋ ಸಂಘದ ಸದಸ್ಯರು. ಸಾರ್ವಜನಿಕರು ಇದ್ದರು.