ಮೂಡಿಗೆರೆಯ ವಿದ್ಯಾರ್ಥಿಗಳಿಂದ ಕರಾಟೆಯಲ್ಲಿ ಕರ್ನಾಟಕಕ್ಕೆ ಎರಡು ಪದಕ

ಮೂಡಿಗೆರೆ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಎಂಇಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸನದ್ ಶರೀಫ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಿಟ್ಟಿಸಿಕೊಂಡಿದ್ದಾರೆ. 6ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಿಕಾಝ್ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕೇರಳದ ಕಲ್ಲಿಕೋಟೆಯಲ್ಲಿ ಭಾನುವಾರ ಕೃಷ್ಣಮೆನನ್ ಇಂಡೋರ್ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆದಿದೆ. ದೇಶದ ವಿವಿಧ ರಾಜ್ಯದಿಂದ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಕೇರಳ ತನ್ನ ಮುಡಿಗೇರಿಸಿಕೊಂಡಿದೆ. ಸೆನ್ ಸಾಯ್ ರಾಜೇಂದ್ರನ್, ಬೇಬಿಲತಾ, ಪೂಜಿತ್, ಅಶ್ವಿನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಸನದ್ ಶರೀಫ್ ಅವರು ಪಟ್ಟಣದಲ್ಲಿ ಹಾಸಿಗೆ ಅಂಗಡಿಯನ್ನು ಹೊಂದಿರುವ ಮಹಮ್ಮದ್ ಶರೀಫ್ ಮತ್ತು ಶಮಾ ಶರೀಫ್ ದಂಪತಿಗಳ ಪುತ್ರ, ತೃತೀಯ ಸ್ಥಾನ ಪಡೆದ ಮಹಮ್ಮದ್ ರಿಕಾಝ್ ಅವರು ಸಂತೆಗಳಲ್ಲಿ ತಿಂಡಿ ವ್ಯಾಪಾರ ನಡೆಸುತ್ತಿರುವ ಲತೀಫ್ ಮತ್ತು ಸಲಿಕಾ ಭಾನು ದಂಪತಿಗಳ ಪುತ್ರ, ಇವರ ಸಾಧನೆಗೆ ಎಂಇಎಸ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ ಎಂ.ಎಸ್.ಹರೀಶ್, ಪ್ರಾಂಶುಪಾಲೆ ಚಿಂತು ಅಭಿನಂದನೆ ಸಲ್ಲಿಸಿದ್ದಾರೆ.