ಮೂಡಿಗೆರೆ ತಾಲೂಕಿನ ದೇವರಮನೆ ಶ್ರದ್ಧಭಕ್ತಿಯ ಕೇಂದ್ರದ ಜೊತೆಗೆ ಪ್ರಮುಖ ಪ್ರವಾಸಿತಾಣವೂ ಆಗಿದೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಇಲ್ಲಿಗೆ ಬರುವ ಕೆಲ ಪ್ರವಾಸಿಗರು ಮದ್ಯ ಸೇವನೆ ಮಾಡಿ ಕುಣಿದು ಕುಪ್ಪಳಿಸುವುದು ಬಾಟಲಿಗಳನ್ನು ಪುಡಿ ಮಾಡಿ ವಿಕೃತ ಆನಂದ ಅನುಭವಿಸುವುದು ಮತ್ತಿತರ ಮೋಜು ಮಸ್ತಿ ಮಾಡುವವರಿಗೆ ಬಣಕಲ್ ಠಾಣೆಯ ಮಹಿಳಾ ಪಿ.ಎಸ್.ಐ ರೇಣುಕಾರವರು ಬಿಸಿ ತುಪ್ಪವಾಗಿ ಪರಿಣಮಿಸುತ್ತಿದ್ದಾರೆ.
ದಿಟ್ಟ ಅಧಿಕಾರಿಯಾಗಿರುವ ರೇಣುಕಾರವರು ದೇವರ ಮನೆಯ ಸಮಸ್ಯೆಯನ್ನು ಸಾಕಷ್ಟು ತಹಬದಿಗೆ ತರುತ್ತಿದ್ದಾರೆ ಎಂಬುದೆ ಸದ್ಯಕ್ಕೆ ಪ್ರವಾಸಿಗರಿಗೂ ಹಾಗೂ ಗ್ರಾಮಸ್ಥರಿಗೂ ಸಂತಸ ತರಿಸಿದೆ.
ರಸ್ತೆ ಬದಿಯಲ್ಲಿ ಬಾಟಲಿಗಳನ್ನು ಹೊಡೆದು ಹಾಕುವುದು,ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲೆ ಎಸೆಯುವುದು ಹೀಗೆ ಪರಿಸರ ಹಾನಿ ಮಾಡುವ ಕಿಡಿಗೇಡಿಗಳಿಗೆ ತಾವೇ ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಮೋಜು ಮಸ್ತಿ ಮಾಡುವ ಕಿಡಿಗೇಡಿಗಳಿಗೆ ಪ್ರಕರಣ ದಾಖಲಿಸಿ ದಂಡ ವಿಧಿಸುವುದರ ಮುಖಾಂತರ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದೇವರ ಮನೆಯ ಪ್ರವಾಸಿ ಸ್ಥಳದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಹೋಂ ಗಾರ್ಡ್ ಗಳನ್ನು ನಿಯೋಜನೆ ಮಾಡಿದ್ದಾರೆ. ಶನಿವಾರ ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ತಾವೇ ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ರನ್ನು ನಿಯೋಜಿಸುವ ಮುಖಾಂತರ ಕ್ರಮ ತೆಗೆದು ಕೊಂಡಿದ್ದಾರೆ.
ದೇವರ ಮನೆಯ ಕೆಲ ಸ್ಥಳದಲ್ಲಿ ಗ್ರಾಮಸ್ಥರು ಪೊಲೀಸರೊಂದಿಗೆ ಕೈ ಜೋಡಿಸಿ ಸಿ.ಸಿ ಕ್ಯಾಮರ ಅಳವಡಿಕೆಗೆ ಸಿದ್ಧತೆ ನಡೆಸಿದ್ದಾರೆ. ಹೀಗೆ ಪಿ ಎಸ್ ಐ ರೇಣುಕಾ ರವರು ದೇವರ ಮನೆಯಲ್ಲಿ ಕೈಗೊಂಡ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೇ ವ್ಯಕ್ತವಾಗಿದೆ.
ವರದಿ ✍️ಸೂರಿ ಬಣಕಲ್