ಸಾವಿಗೆ ಹೊರಟವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದ ಹಾಸನ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಮಂಜುಳ


ಹಾಸನ : ಆ ತಾಯಿ ಮಗ ಸಂಬಂಧಿಯೊಬ್ಬರ ಸಾವಿಗೆಂದು ಗುರುವಾರ ಹೊಳೆನರಸೀಪುರದ ತೆರಣ್ಯದಿಂದ ಬೈಕಿನಲ್ಲಿ ಹಾಸನಕ್ಕೆ ಬರುತ್ತಿದ್ದರು…

ಈ ನಡುವೆ ಸಂತೆ ಪೇಟೆಗೆ ಬರುವಾಗ ಎದುರಿಗೆ ಸಿಕ್ಕವರು ಟ್ರಾಫಿಕ್ ಪೊಲೀಸರು. ಸಾವಿನ ದುಗುಡದಲಿದ್ದ ಅವರಿಗೆ ದಾರಿ ತೋರಲಿಲ್ಲ. ಜೇಬಲ್ಲಿ ನೂರೈವತ್ತು ರೂಪಾಯಿ ಹೊರತಾಗಿ ಬೇರೇನು ಇರಲಿಲ್ಲ. ”ಸಾವಿಗೆ ಹೋಗುತ್ತಿದ್ದೇವೆ ದಯಮಾಡಿ ಬಿಟ್ಟುಕೊಡಿ ತಾಯಿ” ಎಂದು ತಾಯಿ ಮಗ ಬೇಡಿಕೊಂಡರು. ಡ್ರೈವಿಂಗ್ ಲೈಸೆನ್ಸ್ , ಹೆಲ್ಮೆಟ್ , ಮಾಸ್ಕ್ ಎಲ್ಲವೂ ಇದ್ದವು ಆದರೆ ಇನ್ಸೂರೆನ್ಸ್ ಇಲ್ಲದ ಕಾರಣ ಹಿಂದೆ ಮುಂದೆ ನೋಡದೆ ಸಾವಿರ ರೂಪಾಯಿ ಫೈನ್ ಬರೆದಾಗಿತ್ತು. ಸಾವಿಗೆ ಹೋಗುವ ತುರ್ತಿನಲಿದ್ದ ಇವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಣ ಇಲ್ಲದೇ ಪರದಾಡುತ್ತಿದ್ದಾತನಿಗೆ ಪೊಲೀಸರೇ ಯಾರೊಟ್ಟಿಗಾದರೂ ಗೂಗಲ್ ಪೇ ‘ ಮಾಡಿಸ್ಕೊಳಪ್ಪಾ ಎಂದು ಸಲಹೆ ಕೂಡ ನೀಡಿದರು. ತಾನು ಕೆಲಸ ಮಾಡುವ ಮಾಲೀಕನಿಗೆ ಕರೆ ಮಾಡಿ ಸ್ಥಳದಲಿದ್ದ ವ್ಯಕ್ತಿಯೊಬ್ಬರ ಫೋನಿಗೆ ಹಾಕಿಸಿದ. ಆ ಯುವಕ ಸಾವಿರ ರೂಪಾಯಿ ಪಡೆದುಕೊಂಡು ಸಬ್ ಇನ್ಸ್ ಪೆಕ್ಟರ್ ಮಂಜುಳ ಅವರ ಬಳಿ ಹೋಗಿ ಹಣ ಕೊಟ್ಟು ರಶೀತಿ ಪಡೆದು ಬಂದ . ಬರುವಾಗ ''ನಮ್ಮಂತಹ ಬಡವರ ಹೊಟ್ಟೆ ಉರಿಸುತ್ತೀರಿ ನಿಮಗೆ ಒಳ್ಳೆಯದಾಗುವುದಿಲ್ಲ'' ಎಂದು ಬೈಯ್ಯುತ್ತಾ ಬಂದು ಬೈಕ್ ಹತ್ತಿ ಕಿಕ್ ಮಾಡಲು ಆರಂಭಿಸಿದ. ಆದರೆ ಇವನ ಮಾತನ್ನು ಕೇಳಿಸಿಕೊಂಡು ಮಂಜುಳ ಬೈಕ್ ಬಳಿ ಬಂದು ಕೀ ಕಿತ್ತುಕೊಂಡು ಪೊಲೀಸರಿಗೆ ಶಾಪ ಹಾಕುತ್ತೀಯಾ ಎತ್ತಾಕೊಳ್ರೋ ಎಂದು ಹೇಳಿದರು. ತಕ್ಷಣ ಶಿವ ಕುಮಾರ್ ತಾಯಿ ಚನ್ನಮ್ಮ ,ತಾಯಿ ಅವನಿಗೆ ಏನು ಮಾಡಬೇಡಿ ಸಾವಿಗೆ ಹೋಗುತ್ತಿದ್ದೇವೆ ಎಂದು ಕಾಲಿಗೆ ಬೀಳಲು ಹೋದಾಗ ಅಮಾನವೀಯವಾಗಿ ನಡೆದುಕೊಂಡ ಸಬ್ ಇನ್ಸ್ ಪೆಕ್ಟರ್ ಆಕೆಯನ್ನು ತಳ್ಳಿದರು. ಬೈಕು ಪಕ್ಕಕ್ಕೆ ಬಿತ್ತು . ಇದರಿಂದ ಕೋಪಗೊಂಡ ಯುವಕ ಯಾಕೆ ಹೀಗೆ ಮಾಡುತ್ತಿದ್ದೀರಿ ..? ನಾವೇನು ತಪ್ಪು ಮಾಡಿದ್ದೇವೆ” ಎಂದು ತಿರುಗಿ ಮಾತನಾಡಿ. ಇದರಿಂದ ಕೋಪಗೊಂಡ ಪಿಎಸ್ ಐ ಮತ್ತು ಡ್ರೈವರ್ ಹಾಗೂ ಇತರರು ಸೇರಿಕೊಂಡು ಯುವಕನ ಮೇಲೆ ದಬ್ಬಾಳಿಕೆ ಮಾಡಿದರು.

ಅಮಾನವೀಯತೆ ಮರೆದ ಪೊಲೀಸರು

ನಂತರ ನಡೆದಿದ್ದು ನಿಜಕ್ಕೂ ಅಮಾನವೀಯತೆ ಪ್ರದರ್ಶನ. ಹಣ ಕೊಟ್ಟ ಹುಡುಗ ಹೋಗುವಾಗ ಕಷ್ಟಪಟ್ಟು ದುಡಿದು ಕೂಲಿ ಮಾಡುತ್ತೇವೆ. ಈ ಹಣ ಸಂಪಾದಿಸಲು ಎರಡು ದಿನ ದನ ದುಡಿದಂತೆ ದುಡಿಯಬೇಕು ಅಮಾಯಕರನ್ನು ಗೋಳು ಹೊಯ್ಯುತ್ತೀರಲ್ಲಾ ಎಂದಿದ್ದೇ ಮತ್ತೂ ಸಿಟ್ಟಾದ ಪೊಲೀಸ್ .. ಏನೋ ಮಾತನಾಡುತ್ತೀಯಾ ಬಾ ಇಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಆತನನ್ನು ಎಳೆದುಕೊಂಡು ಹತ್ತೋ ಜೀಪು ಎಂದರು. ಸ್ವಾಮಿ ದಯಮಾಡಿ ಬಿಡಿ ನನ್ನ ಮಗ ಹೊಟ್ಟೆ ಉರಿಗೆ ಹಾಗಂದಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ …ಸಾವಿಗೆ ಹೋಗುತ್ತಿದ್ದೇವೆ ದಯಮಾಡಿ ಕ್ಷಮಿಸಿ ಎಂದು ಅಂಗಲಾಚಿದ ತಾಯಿ ಪಿಎಸ್ಐ ಕಾಲಿಗೆ ಬೀಳಲು ಹೋದರು . ಅಲ್ಲಿ ನರೆದಿದ್ದ ಐವತ್ತಕ್ಕೂ ಹೆಚ್ಚು ಜನ ಹೋಗಲಿ ಬಿಡಿ ಸಾವಿಗೆ ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ಹೇಳಿದರೂ ಯಾರೊಬ್ಬರ ಮನಸ್ಸು ಕರಗಲೇ ಇಲ್ಲ. ಬದಲಾಗಿ ಕನಿಕರವನ್ನೇ ಮರೆತ ಪೊಲೀಸರು ಅಲ್ಲೆ ಹೋಗುತ್ತಿದ್ದ ಟಾಟಾ ಎಸಿ ಯನ್ನು ನಿಲ್ಲಿಸಿ ಸಾವಿಗೆ ಹೋಗುತ್ತಿದ್ದ ಬೈಕನ್ನು ಠಾಣೆಗೆ ಕಳಿಸಿದರು . ನಂತರ ಪ್ಯಾಸೆಂಜರ್ ಆಟೋದೊಳಗೆ ತಾಯಿ ಮಗನನ್ನು ಕೂರಿಸಿಕೊಂಡು ನಗರ ಠಾಣೆಗೆ ಕರೆತಂದರು

ಸಂಬಂಧಿಕರ ಸಾವಿಗೆ ಹೋಗಬೇಕು ಕೊನೆ ಬಾರಿಗೆ ಮುಖ ನೋಡಬೇಕೆಂದು ಪರಿಪರಿಯಾಗಿ ಬೇಡಿಕೊಂಡರೂ ಬೈಕನ್ನು ನೀಡದ್ದರಿಂದ ಠಾಣೆಯಲ್ಲಿ ಅಳುತ್ತಾ ಕುಳಿತರು. ಹೋಗಿ ಬಂದು ಕೈ ಮುಗಿದು ಕಾಲು ಹಿಡಿದರೂ ಯಾರ ಮನಸ್ಸು ಕರಗಲಿಲ್ಲ. ಅಂತಿಮವಾಗಿ ಸಂಜೆವರೆಗೂ ಅವರನ್ನು ಠಾಣೆಯಲ್ಲಿ ಕೂರಿಸಿಕೊಂಡು ಅವರ ಮೇಲೆಯೇ ಇಲ್ಲ ಸಲ್ಲದ ಆರೋಪ ಹೊರಿಸಿ ಪಿಟಿ ಕೇಸ್ ಹಾಕಿ ಸಂಜೆ ಆರು ಗಂಟೆಗೆ ಬೈಕ್ ಬಿಟ್ಟು ಕಳಿಸಿದರು. ಇದಿಷ್ಟು ನಡೆದಿರುವ ಘಟನೆ .
ಎಷ್ಟು ಬೇಡಿಕೊಂಡರು ಬಿಡಲಿಲ್ಲ

ಈ ಬಗ್ಗೆ ಭೀಮ ವಿಜಯ’ ದೊಂದಿಗೆ ಕಣ್ಣೀರು ಹಾಕುತ್ತಾ ಮಾತನಾಡಿದ ಶಿವ ಕುಮಾರ್ ನಾವು ಸಾವಿಗೆ ಹೊರಟಿದ್ದೆವು . ಪರಿಪರಿಯಾಗಿ ಬೇಡಿಕೊಂಡರೂ ಬಿಡಲಿಲ್ಲ. ಸಾವಿರ ರೂಪಾಯಿ ದಂಡ ಕಟ್ಟಿದ್ದಕ್ಕೆ ನಾನು ಅವರಿಗೆ ಅಸಹನೆ ತೋಡಿಕೊಂಡಿದ್ದು ನಿಜ. ಏಕೆಂದರೆ ಒಂದು ಸಾವಿರ ದುಡಿಯಲು ಮೂರು ದಿನ ಕೂಲಿ ಮಾಡಬೇಕು. ನನ್ನ ತಾಯಿಗೆ ಬಾಯಿಗೆ ಬಂದಂತೆ ಬೈದರು. ಕೆಟ್ಟದಾಗಿ ನಡೆಸಿಕೊಂಡರು ಹಾಗಾಗಿ ಇನ್ನೂ ಬೇಸರವಾದಾಗ . ನಮ್ಮಂತಹ ಕೂಲಿ ಮಾಡುವರಿಗೆ ಹೀಗೆ ಮಾಡುತ್ತೀರಲ್ಲಾ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದು ನಿಜ. ಒಬ್ಬ ಪಿಸಿ ಬೂಟಿನಲ್ಲಿ ಒದ್ದರು. ಇದಕ್ಕೆ ಜನಗಳೇ ಸಾಕ್ಷಿ ಬಡವರಾಗಿ ಹುಟ್ಟಿದ್ದು ತಪ್ಪೇ ..? ಇವತ್ತು ನಮ್ಮ ಸಂಬಂಧಿಕರ ಸಾವಿನ ಮುಖ ನೋಡಲು ಬಿಡಲಿಲ್ಲ ಇವರಿಗೆ ಒಳ್ಳೆಯದಾಗುತ್ತದೆಯೇ..? ಎಂದು ಅಳಲು ತೋಡಿಕೊಂಡ.

ಹಸಿವಲ್ಲೇ ಸಂಜೆವರೆಗೆ ಸ್ಟೇಷನ್ ನಲ್ಲಿ ಕೂರಿಸಿದರು

“ಜೀವನದಲ್ಲಿ ಯಾವತ್ತೂ ಪೊಲೀಸ್ ಠಾಣೆಗೆ ಹೋಗಿಲ್ಲ. ಆ ಯಮ್ಮನ ಕಾಲು ಹಿಡಿದುಕೊಂಡೆ ಬೆಳಗ್ಗೆ ತಿಂದಿದ್ದು. ಇಡೀ ದಿನ ನಮ್ಮನ್ನು ಉಪವಾಸ ಬೀಳಿಸಿದರು. ಹನಿ ನೀರನ್ನೂ ಕೊಡಲಿಲ್ಲ . ಸಾವಿಗೂ ಹೋಗದಂತೆ ಮಾಡಿ ಠಾಣೆಯಲ್ಲೇ ಕೂರಿಸಿಕೊಂಡರು. ಪೊಲೀಸರು ಹಿಂಗೂ ಮಾಡುತ್ತಾರೆ ಎಂದು ಇವತ್ತೆ ಗೊತ್ತಾಗಿದ್ದು . ಸ್ಟೇಷನ್ ಮೆಟ್ಟಿಲು ಹತ್ತಿ ಭಯ ಗೊಂಡಿದ್ದೇವೆ. ಏನಾದರೂ ಆದರೆ ಅವರೇ ಹೊಣೆ’’

ಚನ್ನಮ್ಮ ( ಶಿವ ಕುಮಾರ್ ತಾಯಿ )

ಘಟನೆ ಸ್ಥಳದಲ್ಲಿ ಅನೇಕ ಸ್ಥಳೀಯರು ನೆರೆದಿದ್ದರಿಂದ ಕೆಲವರು ಘಟನಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು ತಮ್ಮ ತಪ್ಪು ಎಲ್ಲಿ ಗೊತ್ತಾಗುತ್ತದೆಯೋ ಎಂದು ವೀಡಿಯೋ ಮಾಡಿದವರನ್ನು ಕರೆಸಿ ಅವರ ಮೊಬೈಲ್ ಕಿತ್ತುಕೊಂಡು ವೀಡಿಯೋ ಡಿಲೀಟ್ ಮಾಡಿದ್ದೂ ನಡೆಯಿತು. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಪೊಲೀರ ವರ್ತನೆ ಹಾಗೂ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಿಎಸ್ಐ ರನ್ನು ಅಮಾನತು ಮಾಡಬೇಕು ಹಾಗೂ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸ್ ದೌರ್ಜನ್ಯದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಾಸನದ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಎಂದೇ ಹೆಸರು ಪಡೆದಿರುವ ಶ್ರೀನಿವಾಸ ಗೌಡರು ಘಟನೆಯ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವರೆಂಬ ನಂಬಿಕೆ ಸಾರ್ವಜನಿಕರದ್ದು.