ಶೀಘ್ರದಲ್ಲೇ ಬಣಕಲ್ ನಲ್ಲಿ ಬಸ್ ತಂಗುದಾಣ ಕಾಮಗಾರಿ ಆರಂಭ

ಬಣಕಲ್ ನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಬೇಡಿಕೆಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಪಂದನೆ ದೊರಕಿದೆ.ಪ್ರಯಾಣಿಕರಿಗೆ ಬಸ್ ಕಾಯಲು ಸರಿಯಾದ ತಂಗುದಾಣವಿಲ್ಲದೆ ಮಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಮುಂದುವರಿದಿತ್ತು ಸಾರ್ವಜನಿಕ ಸಂಘಟನೆಗಳು ಹಲವು ಬಾರಿ ಇದಕ್ಕೆ ಶಾಶ್ವತ ಪರಿಹಾರ ಕೊಡಲು ಮನವಿ ಮಾಡಿದ್ದರು.ಕೆಲವು ದಿನಗಳ ಹಿಂದೆ ಬಣಕಲ್ ನ್ಯೂಸ್ ನಲ್ಲಿ ಬಸ್ಸು ಕಾಯುವಿಕೆಗೆ ಸಾರ್ವಜನಿಕರು ಪಡುತ್ತಿರುವ ಸಮಸ್ಯೆ ಗಳ ಬಗ್ಗೆ ವಿಸ್ತಾರವಾಗಿ ವರದಿ ಮಾಡಿತ್ತು.

ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ತಿಳಿದು ಬಂದಿದೆ. ಇದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳೀಯ ಸಂಪನ್ಮೂಲಗಳ (ವರ್ಗ 1ರ )ಅಡಿಯಲ್ಲಿ ಕಾಮಗಾರಿ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಇರ್ಫಾನ್ ರವರು ಪತ್ರಿಕೆಯೊಂದಿಗೆ ಮಾತನಾಡಿ ಬಣಕಲ್ ನಲ್ಲಿ ಪ್ರಯಾಣಿಕರು ಸೂಕ್ತ ತಂಗುದಾಣವಿಲ್ಲದೆ ಸಮಸ್ಯೆ ಪಡುತ್ತಿರುವುದು ಹಲವು ವರ್ಷಗಳಿಂದ ಇದೆ.ವರ್ಷಗಳಿಂದ ಯೋಜನೆಯ ಬಗ್ಗೆ ಪ್ರಸ್ತಾವಗಳು ನಡೆಯುತ್ತಿತ್ತಾದರೂ ಅನೇಕ ಅಡ್ಡಿ -ಆತಂಕಗಳು ಎದುರಾಗಿ ಕಾಮಗಾರಿ ಆರಂಭಗೊಂಡಿರಲಿಲ್ಲ.ನಾವು ಅಧಿಕಾರಕ್ಕೆ ಬಂದಾಗ ನಮ್ಮ ಮುಂದೆ ಇದ್ದ ಮೊದಲ ಆದ್ಯತೆ ಜನರಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸುವುದು,ಅದರಂತೆ ಗ್ರಾಮ ಪಂಚಾಯಿತಿ ವತಿಯಿಂದ ಕಾಮಗಾರಿಗೆ ಸಿದ್ಧತೆ ಮಾಡಲಾಗಿದೆ. ಮಳೆಗಾಲ ಇದ್ದ ಕಾರಣ ಕಾಮಗಾರಿ ಕೈಗೆತ್ತಿಕೊಂಡಿರಲಿಲ್ಲ,ಈಗ ಕೆಲಸ ಪ್ರಾರಂಬಿಸಲು ಒಳ್ಳೆಯ ವಾತಾವರಣ ಇದ್ದು ,ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಏಳುವರೇ ಲಕ್ಷದ ಕ್ರಿಯಾಯೋಜನೆ ತಯಾರಾಗಿದೆ.1ತಿಂಗಳಲ್ಲಿ ಬಸ್ ತಂಗುದಾಣ ಕಾಮಗಾರಿ ಆರಂಭಿಸಲಾಗುವುದು ಎಂದರು.

✍️ವರದಿ :ಸೂರಿ ಬಣಕಲ್