ಬಣಕಲ್ ನ ದಕ್ಷ ನಿಷ್ಠಾವಂತ ಪೊಲೀಸ್ : ಶಶಿ ಸರ್

ಬಣಕಲ್ : ಸರಕಾರಿ ನೌಕರರು ತಮಗೆ ವಹಿಸಿದ ಜವಾಬ್ದಾರಿಯನ್ನು ಮಾಡಿ ವರ್ಗಾವಣೆಗೊಳ್ಳುವುದು ಸಹಜ. ಆದರೆ ಸರಕಾರಿ ನೌಕರರು ತಮ್ಮ ಕರ್ತವ್ಯದಲ್ಲಿ ಜನರಿಗೆ ಒಳ್ಳೆಯದನ್ನು ಮಾಡಿದರೆ, ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸದಾ ಜನರ ಮನಸ್ಸಿನಲ್ಲಿರುತ್ತಾರೆ ಎಂಬುವದಕ್ಕೆ ಬಣಕಲ್ ಠಾಣೆಯಲ್ಲಿ A.S.I.ಆಗಿ ಸೇವೆ ಸಲ್ಲಿಸುತ್ತಿರುವ ಶಶಿ ಅವರೇ ಸಾಕ್ಷಿ.

ಬಣಕಲ್ ನ್ಯೂಸ್ ನ ಇವತ್ತಿನ ವಿಶೇಷ ವರದಿಯ ವಿಶೇಷ ವ್ಯಕ್ತಿಯೇ ನಮ್ಮ ಹೆಮ್ಮೆಯ ಶಶಿ ಸರ್. ಸೌಮ್ಯ ಸ್ವಭಾವದ ವ್ಯಕ್ತಿ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೇ, ಜನರೊಂದಿಗೆ ಸಹ ಸಿಬ್ಬಂದಿಗಳೊಂದಿಗೆ ಬೆರೆತು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಿಂದ ಅವರು ಬಣಕಲ್ ಜನರ ಮನಸಲ್ಲಿ ನೆಲೆಯೂರಿದ್ದಾರೆ.

ಬಣಕಲ್ ಠಾಣೆಯಲ್ಲಿ A.S.I ಆಗಿರುವ ಶಶಿ ಮೂಲತಃ ಕೇರಳ ಮೂಲದವರು, ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು ಆಗಿ ಗುರುತಿಸಿಕೊಂಡಿದ್ದ ಅವರು ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಕ್ರೀಡಾಕೋಟಾದ ಅಡಿಯಲ್ಲಿ ಪೊಲೀಸ್ ಹುದ್ದೆಗೆ ನೇಮಕಾಗೊಂಡರು. ಇಷ್ಟು ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ಆರೋಪವಿಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಶಿ, ಸರ್ ಬಣಕಲ್ ಗೆ ಸೇವೆ ಸಲ್ಲಿಸುವ ಮುನ್ನ ಕುದುರೆಮುಖ, ಆಲ್ದೂರು, ಹರಿಹರಪುರ ಹೀಗೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಶಶಿ ಸರ್ ಅವರು ಪೊಲೀಸ್ ವೃತ್ತಿಯಲ್ಲಿ ಕಾರ್ಯದಕ್ಷತೆಗೆ ಹೆಸರಾಗಿದ್ದಾರೆ. ಅವರು ಕೆಲಸ ಮಾಡಿದಲ್ಲೆಲ್ಲ ಅವರ ಜನಾನುರಾಗಿ ನಡವಳಿಕೆಗೆ ಹೆಸರಾಗಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮೆಚ್ಚಿ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಠಾಣೆಗೆ ಸಣ್ಣವರೇ ಬರಲಿ ದೊಡ್ಡವರೇ ಇರಲಿ ಗೌರವಯುತವಾಗಿ ಮಾತನಾಡುವುದು, ಬಡವರ ಬಗ್ಗೆ ಕಾಳಜಿ ಹೀಗೆ ತಮ್ಮ ವೃತಿಯನ್ನು ಯಾವುದೇ ಅಹಂ ಇಲ್ಲದೆ ಅತ್ಯಂತ ಶ್ರದ್ದೆಯಿಂದ ನಿಭಾಯಿಸುವುದೇ ಅವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾಗರಿಕರಿಗೆ ಕಿರಿಕಿರಿ ಉಂಟು ಮಾಡುವ ವಿಚಾರಗಳ ಬಗ್ಗೆ ಅವರಿಗೆ ಅಸಹನೆ ಇದ್ದು ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೋಲೀಸರ ಕರ್ತವ್ಯ ಎಂದು ಹೇಳುತ್ತಾರೆ.

ಶಶಿ ಅವರ ಕುರಿತಂತೆ ಅಭಿಪ್ರಾಯ ಹಂಚಿಕೊಂಡವರೆಲ್ಲರೂ ಅವರ ಸರಳತೆ, ಎಂತದ್ದೇ ತಪ್ಪಿನ ಸಂದರ್ಭದಲ್ಲಿ ಸಿಟ್ಟಾಗದಿರುವುದು, ಕೆಳಗಿನ ಸಿಬ್ಬಂದಿಯಿಂದ ಹಿಡಿದು ಪ್ರತಿಯೊಬ್ಬರನ್ನೂ ಆಪ್ತತೆಯಿಂದ ಕಾಣುತ್ತಿದ್ದ ಬಗೆ, ಜನಸಾಮಾನ್ಯರೊಂದಿಗೆ ಸ್ಪಂದಿಸುತ್ತಿರುವ ರೀತಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ವೃತ್ತಿಕಾರ್ಯ ಪ್ರತಿಯೊಬ್ಬ ಪೊಲೀಸರಿಗೆ ಹಿಡಿದ ಕೈಗನ್ನಡಿಯಂತಿದೆ.

✍️ *ವರದಿ ಸೂರಿ ಬಣಕಲ್*